Karavali
ಮಂಗಳೂರು: ಆರೋಗ್ಯವಾಗಿರಲು ಉತ್ತಮ ಪರಿಸರ ಅಗತ್ಯ, ಸ್ಪಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ - ಸಚಿವ ಅಂಗಾರ
- Sat, Oct 02 2021 05:01:50 PM
-
ಮಂಗಳೂರು, ಅ 02 (DaijiworldNews/MS): ಸ್ಪಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಮ್ಮ ಸುತ್ತಲಿನ ಪ್ರದೇಶವನ್ನು ಸ್ಪಚ್ಛವಾಗಿಟ್ಟುಕೊಂಡಲ್ಲೀ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಕೂಡ ಸ್ಪಚ್ಛವಾಗುತ್ತದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಅಭಿಪ್ರಾಯಪಟ್ಟರು.
ಅವರು ಅ.೨ರ ಶನಿವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಆರೋಗ್ಯವಾಗಿರಲು ಉತ್ತಮ ಪರಿಸರದ ಅಗತ್ಯತೆಯಿದೆ, ಹಾಗಾಗಿ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪಚ್ಛತೆಯ ನಿರ್ವಹಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಸಮಪರ್ಕವಾಗಿ ಆಗಬೇಕು, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ವಿಂಗಡನೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದರು.
ಸರಕಾರ ಸ್ಪಚ್ಛತೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ, ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ. ಜಿಲ್ಲೆಯಲ್ಲಿ ಸ್ಪಚ್ಛತಾ ಸೇವಾಗಾರರಿಂದ ಉತ್ತಮ ಕೆಲಸಗಳಾಗಿವೆ. ಈ ದಿಸೆಯಲ್ಲಿ ಅವರನ್ನು ಇಂದು ಸನ್ಮಾನಿಸಲಾಗಿದೆ, ಈ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, 2016ರ ಅಕ್ಟೋಬರ್ 02 ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದ್ದು, 392 ಸಾರ್ವಜನಿಕ ಶೌಚಾಲಯಗಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯ 7 ತಾಲೂಕುಗಳ ಒಟ್ಟು ೨೨೩ ಗ್ರಾಮ ಪಂಚಾಯತಿಗಳಲ್ಲಿ 200 ಗ್ರಾಮ ಪಂಚಾಯತ್ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಡಿ.ಪಿ.ಆರ್ ಅನುಮೋದನೆಗೆ ಕ್ರಮವಹಿಸಲಾಗಿದೆ. 186 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಜಮೀನು ಮಂಜೂರಾತಿ ಮಾಡಲಾಗಿರುತ್ತದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ 100 ಸ್ವಚ್ಛ ಸಂಕೀರ್ಣ ಘಟಕಗಳು ಕಾರ್ಯಾಚರಣೆಯಲ್ಲಿದ್ದು, ೫೮ ಘಟಕಗಳು ಪ್ರಗತಿಯಲ್ಲಿವೆ. ಉಳಿದ ಗ್ರಾಮ ಪಂಚಾಯತಿಗಳಲ್ಲಿ ಹಳೆಯ ಮತ್ತು ತಾತ್ಕಾಲಿಕ ಕಟ್ಟಡವನ್ನು ಉಪಯೋಗಿಸಿ, ಒಣ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ, ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ೯೬ ಸ್ವಚ್ಛ ವಾಹಿನಿಗಳನ್ನು ಖರೀದಿಸಲಾಗಿದ್ದು, ಉಳಿದ ಗ್ರಾಮ ಪಂಚಾಯತಿಗಳಲ್ಲಿ 15ನೇ ಹಣಕಾಸಿನ ಅನುದಾನದಡಿ, ವಾಹನ ಖರೀದಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಪ್ಲಸ್-1 ಎಂದು 2021ರ ಆಗಸ್ಟ್ 15 ರಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗಾ), 15ನೇ ಹಣಕಾಸು ಯೋಜನೆ, ನರೇಗಾ, ಅನುದಾನ ಬಳಸಿಕೊಂಡು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಬೂದು ನೀರು ನಿರ್ವಹಣೆಗೆ ಕ್ರಮವಹಿಸಲಾಗುತ್ತಿದೆ ಎಂದರು.
ಜಿಲ್ಲೆಯ ಬೆಳ್ತಂಗಡಿಯ ಉಜಿರೆ, ಬಂಟ್ವಾಳದ ಗೋಳ್ತಮಜಲು, ಪುತ್ತೂರಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ಗಳಲ್ಲಿ ಕಪ್ಪುನೀರು ನಿರ್ವಹಣೆಗೆ ಎಫ್.ಎಸ್.ಎಂ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಣ ತ್ಯಾಜ್ಯ ನಿರ್ವಹಣೆಗೆ ಎಂ.ಆರ್.ಎಫ್ ಘಟಕ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ನನಡಿ ಸಂಪೂರ್ಣ ಜಿಲ್ಲೆಯಲ್ಲಿ ಸತತ 100 ದಿನಗಳ ಕಾಲ (ಅಕ್ಟೋಬರ್ 2ರಿಂದ ಜನವರಿ 09 2021) ಸೋಕ್ ಪಿಟ್ ಅಭಿಯಾನ ಕೈಗೊಂಡು ಪ್ರತಿ ಮನೆಗೆ ಸೋಕ್ ಪಿಟ್ ನಿರ್ಮಾಣ ಮಾಡಲು ಪಣ ತೊಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ವೇತನಗೊಳಿಸಿ ಅಭಿವೃದ್ಧಿಗೊಳಿಸುವುದು, ಕೊಳಚೆ ನೀರು ಸದ್ಬಳಕೆ ಮಾಡಿಕೊಳ್ಳುವುದು, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟಲು ಬಚ್ಚಲು ಗುಂಡಿ ಅಭಿಯಾನದ ಮುಖ್ಯ ಉದ್ದೇಶ ಎಂದ ಅವರು, 2021-22ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 223 ಗ್ರಾಮ ಪಂಚಾಯತಿಗಳಲ್ಲಿ 100 ದಿನಗಳ ಬಚ್ಚಲು ಗುಂಡಿ ಅಭಿಯಾನ ಕೈಗೊಂಡು ಅರ್ಹ ನರೇಗಾ ಫಲಾನುಭವಿಗಳಿಗೆ ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಲು 14 ರಿಂದ 17 ಸಾವಿರದವರೆಗೆ ಅನುದಾನ ದೊರೆಯಲಿದೆ ಎಂದು ತಿಳಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಸಂಸದರಾದ ನಳೀನ್ ಕುಮಾರ್ ಕಟೀಲ್, ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಧ್ಯಾ ವೇದಿಕೆಯಲ್ಲಿದ್ದರು. ಸ್ಪಚ್ಛ ಭಾರತ್ ಮಿಷನ್ನ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಕುಮಾರ್ ವಂದಿಸಿದರು. ಚಿನ್ಮಯಿ ಗಾಂಧಿ ಸೃತಿ ಹಾಡಿದರು.
ಇದಕ್ಕೂ ಮೊದಲು ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಸತ್ಯಾಗ್ರಹಾ ಪೇ ಸ್ವಚ್ಛಾಗ್ರಹಿ ರಥಯಾತ್ರೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ“ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಓರ್ವ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಗುರುತಿಸಿ, ಗೌರವಿಸುವುದು, ಮತ್ತು ಯೋಜನೆಯ ಪ್ರಗತಿಯಲ್ಲಿ ಮುನ್ನಡೆಯಲ್ಲಿರುವ ಓರ್ವ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಗುರುತಿಸಿ ಗೌರವಿಸಲಾಯಿತು.
ಸನ್ಮಾನಿತರಾದ ಸ್ವಚ್ಛ ಸೇವಕರ ವಿವರ:
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ನ ಸ್ವಚ್ಛ ಸೇವಕ ಕುಮಾರ್ ಪಟ್ಟಾನ್, ಸುಳ್ಯ ತಾಲೂಕಿನ ಅರಂತೋಡು ಗ್ರಾ.ಪಂ.ನ ಸ್ವಚ್ಛ ಸೇವಕ ಪಸೀಲು ಎ, ಮಂಗಳೂರು ತಾಲೂಕಿನ ಕೆಮ್ರಾಲ್ ಗ್ರಾ.ಪಂ. ಸ್ವಚ್ಛ ಸೇವಕ ದೊಡ್ಡ ಹನುಮಂತ ಪೂಜಾರ, ಮೂಡಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ. ಸ್ವಚ್ಛ ಸೇವಕ ಹರೀಶ್ ಬಿನ್ ಗಂಗು, ಕಡಬದ ಸುಬ್ರಮಣ್ಯ ಗ್ರಾ.ಪಂ. ಸ್ವಚ್ಛ ಸೇವಕ ಉದಯ ಕುಮಾರ್ ಎ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾ.ಪಂ. ಜೋಸೆಫ್ ಆನಂದ, ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ನಾರಾಯಣ ನಾಯ್ಕ ಅವರನ್ನು ಗೌರವಿಸಲಾಯಿತು.
ಸನ್ಮಾನಿತ ಅಧಿಕಾರಿಗಳು:
ಪುತ್ತೂರು ತಾಲೂಕು ಪಾಂಚಾಯತ್ನ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ.ಎಚ್ ಅವರನ್ನು ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಮಂಗಳೂರು ತಾಲೂಕಿನ ಪಾವೂರು, ಮಂಜನಾಡಿ ಗ್ರಾಮ ಪಂಚಾಯತ್ ಹಾಗೂ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ಗಳಿಗೆ ಸ್ವಚ್ಛ ವಾಹಿನಿ ವಾಹನವನ್ನು ಹಸ್ತಾಂತರಿಸಲಾಯಿತು.