ಕುಂದಾಪುರ, ಅ 02 (DaijiworldNews/MS): ಹದಿನೈದು ದಿನಗಳ ಹಿಂದೆ ನಡೆದಿದ್ದ ಮೊಬೈಲ್ ಅಂಗಡಿ ಮಾಲಕನೊಬ್ಬನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಅಹ್ಮದಾಬಾದ್ ನಲ್ಲಿ ಬಂಧಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳನ್ನು ಕೋಟೇಶ್ವರದ ನಿವಾಸಿ ಮುಕ್ತಾರ್ ಕೋಟೇಶ್ವರ(35) ಹಾಗೂ ದೆಹಲಿಯ ಬ್ಯೂಟಿ ಪಾರ್ಲರ್ ಮಾಡಿಕೊಂಡಿರುವ ಪ್ರಿಯಾಂಕಾ ಸಹಾನಿ (25) ಎಂದು ಗುರುತಿಸಲಾಗಿದೆ.
ಮುಸ್ತಾಫಾ
ಕುಂದಾಪುರದಲ್ಲಿ ಹಳೆ ಬಸ್ ನಿಲ್ದಾಣ ಸಮೀಪವಿರುವ ಮೊಬೈಲ್ ಎಕ್ಸ್ ಅಂಗಡಿ ಮಾಲಕ ಮುಸ್ತಾಫನನ್ನು ಸೆ.17ರಂದು ದುಷ್ಕರ್ಮಿಗಳು ಅಪಹರಿಸಿ 4 ಲಕ್ಷದ 64 ಸಾವಿರದ ನೂರ ಎಪ್ಪತ್ತೈದು ರೂಪಾಯಿ ಹಣ ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ದಾಖಲಾತಿಗಳನ್ನು ಸುಲಿಗೆ ಮಾಡಿದ ಬಳಿಕ ಮುಸ್ತಾಫನನ್ನು ಬಿಡುಗಡೆ ಮಾಡಿದ್ದರು. ಮುಸ್ತಾಫಾ ಊರಿಗೆ ಮರಳಿ ಪೊಲೀಸರಿಗೆ ದೂರು ನೀಡಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಲೊಕೇಶನ್ ಆಧಾರದ ಮೇಲೆ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿಗೆ ತಲುಪಿದಾಗ ಆರೋಪಿಗಳು ದೆಹಲಿ ತಲುಪಿದ್ದರು. ತಕ್ಷಣ ಪೊಲೀಸರು ವಿಮಾನದಲ್ಲಿ ದೆಹಲಿಗೆ ಹೋಗಿದ್ದಾರೆ. ಆಗ ಅರೋಪಿಗಳು ಅಹ್ಮದಾಬಾದ್ ಕಡೆ ಪ್ರಯಾಣಿಸುತ್ತಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಎರ್ಟಿಕಾ ಬಾಡಿಗೆ ಕಾರಿನಲ್ಲಿ ಫಾಲೋ ಮಾಡಿದ್ದಾರೆ. ಅದಾಗಲೇ ಆರೋಪಿಗಳು 1000 ಕಿ.ಮೀ ದೂರವಿದ್ದರು. ಅಹ್ಮದಾಬಾದಿನಲ್ಲಿ ಲೊಕೇಶನ್ ಚೆಕ್ ಮಾಡಿದಾಗ ಅಲ್ಲಿನ ಹೊಟೇಲ್ ನಲ್ಲಿರುವುದು ತಿಳಿದಿದ್ದು, ಇಬ್ಬರೂ ಒಂದೇ ರೂಮಿನಲ್ಲಿದ್ದರು ಎನ್ನಲಾಗಿದೆ. ಕುಂದಾಪುರ ಎಸೈ ಸದಾಶಿವ ಗೌರೋಜಿ, ಕೊಲ್ಲೂರು ಎಸೈ ನಾಸಿರ್ ಹುಸೇನ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸತೀಶ್, ಸಚಿನ್, ಮಹಿಳಾ ಹೆಡ್ ಕಾನ್ಸ್ಟೇಬಲ್ ಚಂದ್ರವತಿ ತಂಡದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗಿದ್ದು, ಶುಕ್ರವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳುಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದು ಪೊಲೀಸರು ಸ್ವಾಧೀನ ಪಡೆಯುವ ಸಾಧ್ಯತೆ ಇದೆ.
ಕುಂದಾಪುರ: ಮೊಬೈಲ್ ಶಾಪ್ ಮಾಲೀಕನ ಕಿಡ್ನಾಪ್ - 4.5 ಲಕ್ಷಕ್ಕೂ ಅಧಿಕ ನಗದು ಸಹಿತ ದಾಖಲೆಗಳ ಸುಲಿಗೆ