ಉಪ್ಪಿನಂಗಡಿ, ಅ.02 (DaijiworldNews/PY): ವಂಚನೆ ಜಾಲಕ್ಕೆ ಸಿಲುಕಿ ಮಲೇಷ್ಯಾದಲ್ಲಿ ಜೈಲು ಪಾಲಾಗಿರುವ ಮಗನನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕು ಎಂದು ತಾಯಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾರಿಂಜ ಮನೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮೀನಾಕ್ಷಿ ಅವರ ಪುತ್ರ ಅಮಿತ್ ಕಾರಿಂಜ ಅವರನ್ನು ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಅವರು ಮಲೇಷ್ಯಾಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವ ಕರ್ತವ್ಯಕ್ಕೆ ನಿಯೋಜಿಸಿದ್ದರು. 2013ರ ಮಾರ್ಚ್ 2ರಂದು ಆತನ ಬಳಿ ಎಲೆಕ್ಟ್ರಾನಿಕ್ ವಸ್ತು ಎಂದು ಹೇಳಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಿ ನೀಡಿದ್ದು, ಇದು ಆತನಿಗೆ ತಿಳಿಯದೇ ಮಲೇಷ್ಯಾ ತಲುಪುತ್ತಿದ್ದಂತೆ ಪೊಲೀಸರು ತಪಾಸಣೆ ನಡೆಸುವ ವೇಳೆ ಸಿಕ್ಕಿ ಬಿದ್ದಿದ್ದ. ಈಗ ಆತನ ಪ್ರಾಣಕ್ಕೆ ಸಂಚಕಾರವಾಗುವ ಶಿಕ್ಷೆಯನ್ನು ಆತನಿಗೆ ವಿಧಿಸಲಾಗಿದೆ ಎಂದು ತಿಳಿದು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ನಡೆದ ನಂತರ ಆರೋಪಿಗಳು, ನಿಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಹೊಣೆ ನಮ್ಮದು ಎಂದು ತಿಳಿಸಿ, ಪ್ರಕರಣದ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ತಾಕೀತು ಮಾಡಿದ ಕಾರಣ ಇಷ್ಟು ವರ್ಷ ದೂರು ನೀಡಲಾಗದೇ ಅಸಹಾಯಕರಾಗಿದ್ದೆವು. ಮಗನಿಗೆ ಇತ್ತೀಚೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಹಾಗೂ ನಿಮ್ಮ ಜೀವ ಉಳಿಯದು ಎಂದುಆರೋಪಿಗಳು ಬೆದರಿಕೆ ಹಾಕಿದ್ದರು. ಅಲ್ಲದೇ, ನಂತರ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ನನ್ನ ಮಗನ ಮುಗ್ಧತೆಯನ್ನು ದುರಪಯೋಗಪಡಿಸಿಕೊಂಡು ಆತನ ಮುಖೇನ ಮಾದಕ ದ್ರವ್ಯ ಸಾಗಿಸಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.