ಮಂಗಳೂರು, ಅ.01 (DaijiworldNews/HR): ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು, ಅವರ ಪೋಷಕರು ಶೇಕಡ 50ರಷ್ಟು ಫೀಸು ಪಾವತಿಸಿದ್ದು. ಇನ್ನುಳಿದ ಶೇಕಡ 50 ರಷ್ಟು ಫೀಸು ನೀಡದಿದ್ದರೆ, ಹಾಜರಾಗಲು ಅನುಮತಿ ನೀಡುವುದಿಲ್ಲ ಎಂದು ಅನೇಕ ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬಂದ ಅನ್ವಯ, ಇಂದು ಮಾಜಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜರವರ ನೇತೃತ್ವದಲ್ಲಿ, ಉಪಕುಲಪತಿಗಳಿಗೆ ಇಂತಹ ಕ್ರಮ ಕೈಗೊಳ್ಳದೇ ಇರಲು ಮನವಿಯನ್ನು ಸಲ್ಲಿಸಲಾಯಿತು.
ಕೊರೊನಾ ಸಂದರ್ಭದಲ್ಲಿ ಉಂಟಾದ ತೊಂದರೆಗಳಿಂದಾಗಿಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ತೀರಾ ಹದೆಗೆಟ್ಟಿರುವ ವಿದ್ಯಾರ್ಥಿಗಳ ಪೋಷಕರಿಗೆ, ಶಾಲಾ ಕಾಲೇಜುಗಳ ಫೀಸಿನ ಹೊರೆಯಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಉಪಕುಲಪತಿಗಳನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಇವರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿ ಹೇಳಲಾಯಿತು. ಇದಕ್ಕೆ ಉತ್ತರಿಸಿದ ಪರೀಕ್ಷಾಂಗ ಕುಲಸಚಿವರು 50 ಶೇಕಡ ಫೀಸ್ ನೀಡದೇ ಇದ್ದರೂ, ಸರಕಾರಿ ಕಾಲೇಜುಗಳಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತಡೆಯುವಂತೆ ಇಲ್ಲ ಮಾತ್ರವಲ್ಲದೇ, ಪರೀಕ್ಷೆ ಮುಗಿಸಿ, ಅಂಕಪಟ್ಟಿ ಪಡೆಯುವವರೆಗೂ ಫೀಸನ್ನು ಪಾವತಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು ಮತ್ತು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಉಪಕುಲಪತಿಯ ಮನವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಸೂಯ ಇವರ ಮುಖಾಂತರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಶೀತ್ ಪಿರೇರಾ, ಕೆಪಿಸಿಸಿ ಮಾಧ್ಯಮ ಸಂಚಾಲಕ ಸವಾದ್ ಗೂನಡ್ಕ, ಎನ್.ಎಸ್.ಯು.ಐ ಘಟಕದ ಜಿಲ್ಲಾಧ್ಯಕ್ಷ ನವಾಜ್ ಸುಳ್ಯ, ಮಿಲಾಜ್ ಅತ್ತಾವರ, ಹುಸೈನ್ ಕಾಟಿಪಳ್ಳ, ಹಾಗೂ ಎನ್.ಎಸ್.ಯು.ಐನ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.