ಕಾರ್ಕಳ, ಅ.01 (DaijiworldNews/HR): "ಆರೋಗ್ಯ ಪೂರ್ಣ ಬದುಕಿಗಾಗಿ ಪ್ರತಿಯೊಬ್ಬರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಒಳಗಾಗುವುದು ಅಗತ್ಯವಾಗಿದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ವೈದ್ಯಕೀಯ ಚಿಕಿತ್ಸೆ ಆ ಮೂಲಕ ದೊರಕಲಿದೆ. ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಆಯ್ಯುಷ್ಮಾನ್ ಭಾರತ್ ಯೋಜನೆಯು ನೆರವಾಗಲಿದೆ" ಎಂದು ತಾಲೂಕು ಆರೋಗ್ಯಧಿಕಾರಿ ಕೃಷ್ಣಾನಂದ ಶೆಟ್ಟಿ ಹೇಳಿದರು.
ಎಸ್ವಿಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶೀಕ್ಷಣ ಇಲಾಖೆ, ಕೆಂಎಂಸಿ ಮಣಿಪಾಲ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಮತ್ತು ಲಯನ್ಸ್ ಕ್ಲಬ್ ಕಾರ್ಕಳ ಇದರ ಮುಂದಾಳತ್ವದಲ್ಲಿ ತಜ್ಞ ವೈದ್ಯರಿಂದ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಶಾಲೆಗಳನ್ನು ಆಯ್ದುಕೊಂಡು ಇಂತಹ ಶಿಬಿರವನ್ನು ಆಯೋಜಿಸಲಾಗಿದೆ. 18 ವರ್ಷದೊಳಗಿನವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಿರುವ 150 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ನೆರವು ನೀಡಿದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಡಾ.ಕೃಷ್ಣಾನಂದ ಶೆಟ್ಟಿ ಹೇಳಿದರು.
ಲಯನ್ಸ್ ಕ್ಲಬ್ನ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ, "ಹದಿಹರೆಯಕ್ಕೆ ಕಾಲಿಡುವ ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಯೋಗ, ಧ್ಯಾನ, ಏಕಾಗ್ರತೆಯ ಮೂಲಕ ಮಾನಸಿಕ ಖಿನ್ನತೆಯನ್ನು ದೂರೀಕರಸಬಹುದು. ತುರ್ತು ಚಿಕಿತ್ಸೆ ಅಗತ್ಯ ಕಂಡುಬಂದಲ್ಲಿ ಅಂತವರ ನೆರವಿಗೆ ಲಯನ್ಸ್ ಕ್ಲಬ್ ಮುಂದಾಗಲಿದೆ" ಎಂದು ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
ಕಾರ್ಕಳ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಖಜಾಂಚಿ ಪ್ರಕಾಶ್ ಪಿಂಟೋ, ವೈದ್ಯರಾದ ಡಾ. ನಾಗರಾಜ್, ಡಾ.ಸೌಜನ್ಯ, ಡಾ.ಸಹನಾ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ರಾವ್, ಲಯನ್ಸ್ ರವೀಂದ್ರ ಸಾಲಿಯಾನ್, ನವಲ್ ಡಿಸಿಲ್ವ, ರೋಬರ್ಟ್ ಡಿ ಮೆಲ್ಲೋ, ಪ್ರವೀಣ್ ಕುಮಾರ್, ಪ್ರಕಾಶ್ ರಾವ್ ಉಪಸ್ಥಿತರಿದ್ದರು.