ಉಡುಪಿ, ಅ 01 (DaijiworldNews/MS): ಪೊಲೀಸರಿಂದ ಕಾಪು ಶಾಸಕರು ಮಾಮೂಲಿ ಪಡೆಯುತ್ತಾರೆ ಎಂಬ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿಕೆಗೆ ತಕ್ಷಣ ಸ್ಪಷ್ಟೀಕರಣ ನೀಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, " ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಪೋಲಿಸರಿಂದ ಕಾಪು ಶಾಸಕರು ಮಾಮುಲೂ ಪಡೆಯುತ್ತಾರೆ ಎಂದು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿಕೆ ನೀಡಿದ್ದು, ಈ ವಿಚಾರದ ಕುರಿತಾಗಿ ಮಾಜಿ ಶಾಸಕರಾದ ಸೊರಕೆಯವರು ತಕ್ಷಣ ಸ್ಪಷ್ಟೀಕರಣ ನೀಡಬೇಕು. ಒಂದು ವೇಳೆ ಅವರ ಹೇಳಿಕೆ ಹೌದೆಂದಾದರೆ ಅವರ ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ
ಸೊರಕೆಯವರು ಕಳೆದ ಕೆಲವು ತಿಂಗಳುಗಳಿಂದ ಕಾಪುವಿನಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಆದರೆ ರಾಜಕೀಯಕ್ಕೂ ಒಂದು ಇತಿ ಮಿತಿ ಇದೆ ಎಂದು ಸೊರಕೆಯವರಿಗೆ ತಿಳಿದಿರಬೇಕು. ಯಾಕೆಂದರೆ ಉದ್ಘಾಟನಾ ಸಮಾರಂಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸೊರಕೆಯವರ ಕಾಲದಲ್ಲಿ ಆದ ಕಾಮಗಾರಿ ಎಂದು ಯಾರು ಕೂಡಾ ಅಲ್ಲಗಳೆಯುತ್ತಿಲ್ಲ. ಓರ್ವ ಶಾಸಕನ ಕಾಲದಲ್ಲಿ ಯೋಜನೆಯ ಶಂಕು ಸ್ಥಾಪನೆ ಆದರೆ ಮತ್ತೋರ್ವ ಶಾಸಕನ ಕಾಲದಲ್ಲಿ ಅದು ಉದ್ಘಾಟನೆಗೊಳ್ಳುತ್ತದೆ. ಇಂತಹ ಕಾಮನ್ ಸೆನ್ಸ್ ಮಾಜಿ ಶಾಸಕರಿಗೆ ಇರಬೇಕು . ಅದರ ಬದಲಾಗಿ ತಮ್ಮ ಚೇಲಾಗಳನ್ನು, ಕಾಂಗ್ರೆಸ್ ಫುಡಾರಿಗಳನ್ನು ತಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ನಮಗೆ ಇವುಗಳನ್ನು ಯಾವ ರೀತಿಯಲ್ಲಿ ಮಟ್ಟ ಹಾಕಬೇಕು ಎಂದು ಗೊತ್ತಿದೆ ಎಂದು ಸವಾಲ್ ಹಾಕಿದ್ದಾರೆ.
ಸೊರಕೆಯವರಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದೆ. ಆದರೆ ಅವರ ಪ್ರತಿಭಟನೆ ಕಾಪುವಿನಲ್ಲಿ ಮಾತ್ರ ಏಕೆ? ಎಂದು ಪ್ರಶ್ನಿಸಿದ ಅವರು ಇದು ಮುಂದುವರಿದರೆ ಸೊರಕೆಯವರು ಸಭೆ ಮಾಡುವ ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ ಎಂದು ಹೇಳಿದ್ದಾರೆ.
ಸೊರಕೆಯವರು ಶಾಸಕರಾಗಿದ್ದಾಗ ಲಾಲಜಿ ಮೆಂಡನ್ ಕಾಲದ ಹಲವು ಕಾಮಗಾರಿಗಳ ಉದ್ಘಾಟನೆ ಆಗಿದೆ. ಅಂದು ಈ ಯಾವ ಕಾರ್ಯಕ್ರಮಗಳಿಗೂ ಲಾಲಾಜಿ ಮೆಂಡನ್ ಅವರನ್ನು ಕರೆಯುವ ಸೌಜನ್ಯವನ್ನೂ ಸೊರಕೆಯವರು ತೋರಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಹಿಂದೂ, ಕ್ರಿಶ್ಚಿಯನ್ನರ ಮಾರಣಹೋಮ ಮಾಡಿರುವ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಸರಕಾರ ಆಚರಿಸಿದಾಗ ಸೊರಕರಯವರು ಏಕೆ ಮಾತಾಡಿಲ್ಲ? ಸೊರಕೆಯವರ ಮೊಸಳೆ ಕಣ್ಣೀರಿಗೆ ಯಾವ ಹಿಂದೂ ಕೂಡಾ ಕರಗುವುದಿಲ್ಲ. ಮೈಸೂರಿನ ಘಟನೆಯ ಬಗ್ಗೆ ಇಷ್ಟು ನೋವಾಗಿದ್ದು ಹೌದಾದರೆ ಅವರು ಶ್ರೀರಾಮ ಮಂದಿರದ ಕುರಿತು ಅವರು ನೀಡಿರುವ ಹೇಳಿಕೆಯನ್ನು ಹಿಂಪಡೆಯಲಿ. ಅದು ಬಿಟ್ಟು ಮೂರು ರಸ್ತೆಯಲ್ಲಿ ಸೇರಿಕೊಂಡು ಬೊಬ್ಬೆ ಹಾಕಿದ ಕೂಡಲೇ ಹಿಂದೂ ಕರಗುತ್ತಾನೆ ಎಂಬ ಭಾವನೆ ಬೇಡ ಎಂದು ಹೇಳಿದ್ದಾರೆ.