ಸುಳ್ಯ, ಅ 01 (DaijiworldNews/MS): ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಯುವತಿ ಇದ್ದಾಳೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರಂದು ನಡೆದಿದೆ.
ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು , ಆ ಬಳಿಕ ಪೊಲೀಸರು ಮನೆಯೊಳಗೆ ಹುಡುಕಾಡಿದಾಗ ಯುವತಿ ಇರಲಿಲ್ಲ. ಯುವತಿಯನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಹಿನ್ನಲೆಯಲ್ಲಿ ಬಳಿಕ ಪೊಲೀಸರು ಸಾರ್ವಜನಿಕರ ಗುಂಪನ್ನು ಚದುರಿಸಿ, ಯುವಕ ಸಿದ್ದೀಕ್ ನನ್ನು ವಶಕ್ಕೆ ಪಡೆದಿದ್ದಾರೆ.
ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ.
ಆದೂರು ಪೊಲೀಸರ ವಶ:
ಯುವಕನ ಮನೆಯಲ್ಲಿ ಇದ್ದಳೆನ್ನಲಾದ ಯುವತಿ ಜಾಲ್ಸೂರಲ್ಲಿ ಪತ್ತೆಯಾಗಿದ್ದು ಪೊಲೀಸರು ಜಾಲ್ಸೂರಿಗೆ ತೆರಳಿ ಯುವತಿಯನ್ನು ವಶಕ್ಕೆ ಪಡೆದು ಬಳಿಕ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಜಾಲ್ಸೂರಿನ ರಿಕ್ಷಾ ನಿಲ್ದಾನದಲ್ಲಿ ಯುವತಿ ರಿಕ್ಷಾದವರ ಜೊತೆ ದೇಲಂಪಾಡಿಗೆ ಬಿಡಲು ಹೇಳಿದಾಗ ರಿಕ್ಷಾದವರಿಗೆ ಸಂಶಯ ಬಂದು ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಬಂದು ಯುವತಿಯನ್ನು ಠಾಣೆಗೆ ಕರೆದೊಯ್ದರೆನ್ನಲಾಗಿದೆ. ಯುವತಿ ದೇಲಂಪಾಡಿಯವಳಾಗಿದ್ದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಯುವತಿಯ ತಂದೆ ಆದೂರು ಠಾಣೆಯಲ್ಲಿ ದೂರು ನೀಡಿದ್ದರು.
ಈ ವಿಷಯ ತಿಳಿದ ಬೆಳ್ಳಾರೆ ಪೊಲೀಸರು ಆದೂರು ಠಾಣೆಗೆ ಯುವತಿ ಪತ್ತೆಯಾದ ವಿಷಯ ತಿಳಿಸಿದ್ದು ಆದೂರು ಪೊಲೀಸರು ಬೆಳ್ಳಾರೆ ಠಾಣೆಗೆ ಬಂದು ಯುವಕ ಯುವತಿಯನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.