ಸುಳ್ಯ, ಸೆ.30 (DaijiworldNews/PY): ವಿದ್ಯುತ್ ಸಮಸ್ಯೆ ಬಗ್ಗೆ ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಅಂದಿನ ಇಂಧನ ಸಚಿವ ಡಿಕೆ ಶಿವಕುಮಾರ್ ನಡುವಿನ ಪೋನ್ ಸಂಭಾಷಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಲು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಹಾಜರಾಗಬೇಕು ಎಂದು ಸುಳ್ಯ ನ್ಯಾಯಲಯ ವಾರಂಟ್ ಜಾರಿ ಮಾಡಿತ್ತು. ಬುಧವಾರ ಕೂಡ ಡಿ.ಕೆ.ಶಿ ನ್ಯಾಯಲಯಕ್ಕೆ ಗೈರುಹಾಜರಿ ಆಗುವ ಮೂಲಕ ಅವರ ವಿರುದ್ದ ಮತ್ತೊಮ್ಮೆ ವಾರೆಂಟ್ ಜಾರಿ ಮಾಡಿ ಸುಳ್ಯ ನ್ಯಾಯಾಲಯ ಆದೇಶ ಮಾಡಿದೆ.
ಸಾಕ್ಷಿ ನುಡಿಯಲು ಸತತವಾಗಿ ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್ ಅವರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಐ.ಜಿ.ಪಿ. ಮತ್ತು ಡಿ.ಐ.ಜಿ.ಗೆ ಕೂಡಾ ನೋಟೀಸ್ ಮಾಡಲು ಸೆ. 13ರಂದು ಆದೇಶ ನೀಡಿದ್ದರು. ಸೆ. 29ರಂದು ಪ್ರಕರಣದ ಮುಂದಿನ ವಿಚಾರಣೆ ಹಾಜರಾಗಬೇಕು ಎಂದು ಆದೇಶ ನೀಡಿತ್ತು.
ನ6ಕ್ಕೆ ಹಾಜರಾಗಲು ವಾರಂಟ್: ನ್ಯಾಯಲಯಕ್ಕೆ ಸತತವಾಗಿ ಗೈರಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸುಳ್ಯ ನ್ಯಾಯಲಯದ ನ್ಯಾಯಾಧೀಶರು ನ. 6ರಂದು ಮುಂದಿನ ವಿಚಾರಣೆಗೆ ಸಾಕ್ಷಿ ನುಡಿಯಲು ಹಾಜರಾಗಬೇಕು ಎಂದು 3ನೇ ಬಾರಿ ವಾರೆಂಟ್ ಜಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ: ಸ್ಥಳೀಯವಾಗಿ ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಎಂಬವರು ಫೆಬ್ರವರಿ 28ರಂದು 2016 ರಾತ್ರಿ ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿ ಸಮಸ್ಯೆ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಹೇಳಲಾಗುತಿದ್ದು, ಇದು ಡಿಕೆಶಿಯವರ ಕೋಪ ನೆತ್ತಿಗೇರಲು ಕಾರಣಾವಾಗಿತ್ತು ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಚಿವ ಡಿಕೆಶಿಯವರು ಮೆಸ್ಕಾಂ ಎಂ.ಡಿ. ಮೂಲಕ ಆಗಿನ ಸುಳ್ಯ ಮೆಸ್ಕಾಂ ಪ್ರಭಾರ ಎ.ಇ.ಇ. ಹರೀಶ್ ನ್ಯಾಕ್ ಅವರಿಂದ ಸಾಯಿ ಗಿರಿಧರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ರಾತ್ರಿಯೇ ಬೆಳ್ಳಾರೆಗೆ ಹೋಗಿ ಗಿರಿಧರ ರೈ ಅವರನ್ನು ಬಂಧಿಸಿದ್ದರು. ಸುಳ್ಯದ ಪೊಲೀಸರು ಗಿರಿಧರ ರೈ ಅವರನ್ನು ಬಂಧಿಸಲೆಂದು ಭಾನುವಾರ ಮಧ್ಯ ರಾತ್ರಿ ಅವರ ಮನೆಗೆ ಹೋದಾಗ ಮನೆಯಲ್ಲಿ ರೈ ಜೊತೆ ತಾಯಿ, ಪತ್ನಿ, ಮಗಳು ಇದ್ದರು. ಪೊಲೀಸರ ಕ್ರಮದ ಬಗ್ಗೆ ಒಳಗಿನಿಂದಲೇ ಆಕ್ಷೇಪಿಸಿದರು. ಬಾಗಿಲು ತೆರೆಯಲಿಲ್ಲ. ಅಷ್ಟಕ್ಕೆ ಬಿಡದ ಪೊಲೀಸರು, ಮನೆಯ ಚಾವಣಿ ಹತ್ತಿ ಹೆಂಚುಗಳನ್ನು ಒಡೆದು ಮನೆಯ ಒಳಗೆ ಇಳಿದು, ರೈ ಅವರನ್ನು ಬಂಧಿಸಿದ್ದರು. ಈ ವಿಚಾರ ಅಂದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಆ ಕೇಸ್ನಲ್ಲಿ ಡಿ.ಕೆ.ಶಿವಕುಮಾರ್ ಸಾಕ್ಷಿಯಾಗಿದ್ದು, ಸಾಕ್ಷ್ಯ ನುಡಿಯಲು ಅವರು ಸುಳ್ಯ ನ್ಯಾಯಾಲಯಕ್ಕೆ ಬಂದಿಲ್ಲ. ಅದಕ್ಕಾಗಿ ಅವರಿಗೆ 3 ಬಾರಿ ಸಮನ್ಸ್ ಮತ್ತು ಒಂದು ಬಾರಿ ವಾರಂಟ್ ಆಗಿತ್ತು. ಆದರೆ ಅವರು ನ್ಯಾಯಲಯಕ್ಕೆ ಹಾಜರಾಗಿರಲಿಲ್ಲ. ಇದೀಗ ಬಂದಿರುವ ಹೊಸ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್ ಹಾಜರಾತಿಗಾಗಿ ಮತ್ತೊಮ್ಮೆ 3ನೇ ಬಾರಿ ವಾರಂಟ್ ಆದೇಶ ಹೊರಡಿಸಿದ್ದಾರೆ.