ಉಡುಪಿ, ಸೆ.29 (DaijiworldNews/PY): "ಧಾರ್ಮಿಕ ದೃಷ್ಟಿಯಿಂದ ಫ್ರೌಡಿಮೆ 8 ವರ್ಷಕ್ಕೆ ಅಂತ ಉಲ್ಲೇಖ ಇತ್ತು. ಆಣಿ ಮಾಂಡವ್ಯರು ಎನ್ನುವ ಋಷಿಗಳು ಅದನ್ನು 13 ವರ್ಷಕ್ಕೆ ವಿಸ್ತರಿಸಿದರು. ಮಹಾಭಾರತದಲ್ಲಿ ಇದರ ಉಲ್ಲೇಖ ಬರುತ್ತದೆ. ಒಬ್ಬ 13 ವರ್ಷದ ತನಕ ಅಪ್ರಾಪ್ತನಾಗಿರುತ್ತಾನೆ, ನಂತರ ಪ್ರೌಢ ಎಂದು ಪರಿಗಣಿಸಲ್ಪಡುತ್ತಾನೆ. ಹಾಗಾಗಿ ಶಿರೂರು ಮಠಕ್ಕೆ ನೇಮಕಗೊಂಡ ಪೀಠಾಧಿಪತಿಯನ್ನು ಧಾರ್ಮಿಕ ದೃಷ್ಟಿಯಿಂದ ಬಾಲಸನ್ಯಾಸ ಎಂದು ಪರಿಗಣನೆ ಆಗುವುದಿಲ್ಲ" ಎಂದು ಪೇಜಾವರ ಮಠದ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ಸ್ಪಷ್ಟಪಡಿಸಿದರು.
ಅವರು ಬುಧವಾರ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
"ಗೋ ಕಳ್ಳತನ ವಿಚಾರವಾಗಿ ಮಾತನಾಡುತ್ತಾ, "ಗೋ ಕಳ್ಳತನ ತಡೆಯಲು ಕಠಿಣ ಕಾನೂನುಗಳು ರಚನೆಯಾಗಬೇಕು. ಬಡತನದಿಂದ ಹಸುಗಳನ್ನು ಸಾಕಿ ಅದರ ಹಾಲನ್ನು ಮಾರಿ ಜೀವನ ಸಾಗಿಸುವವರಿಗೆ ರಾತ್ರಿ ಇದ್ದ ದನ ಬೆಳಗಾದಾಗ ನಾಪತ್ತೆಯಾದರೆ, ಜನರಿಗೆ ಆಯುಧಗಳನ್ನು ತೋರಿಸಿ ಬೆದರಿಕೆ ಮಾಡುತ್ತಾರೆಂದರೆ ಸ್ವತಂತ್ರ ಸಮಾಜದಲ್ಲಿ ಒಬ್ಬ ಬದುಕು ಸಾಗಿಸುವುದು ಹೇಗೆ?" ಎಂದು ಪಶ್ನಿಸಿದರು
"ಠಾಣೆಯಲ್ಲಿ ಕೇಸು ದಾಖಲಾದರೆ ಕೋಮುವಾದದ ರೂಪ ಪಡೆದುಕೊಳ್ಳುತ್ತೆ. ಪ್ರತಿಭಟಿಸಲೂ ಅವಕಾಶ ಇಲ್ಲದಂತಾದರೆ, ಬಹಳ ಕಷ್ಟದ ಸಮಯ ಇದು. ಅಂತದ್ದೆಲ್ಲ ಸಮಾಜದಿಂದ ನಿರ್ಮೂಲನೆ ಆಗಬೇಕು" ಎಂದರು.
"ಉಡುಪಿಯಲ್ಲಿ ತಹಶಿಲ್ದಾರರು ಕೊಟ್ಟ ಮಾಹಿತಿಯಂತೆ ಕಾರ್ಕಳ ಹೊರತು ಪಡಿಸಿ ಒಟ್ಟು 2,800 ಎಕ್ರೆ ಗೋಮಾಳ ಪ್ರದೇಶವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗೋಮಾಳಗಳ ಸೃಷ್ಟಿಯಾಗಿತ್ತು, ಬ್ರಿಟಿಷ್ ಸರ್ಕಾರ ಇರುವಾಗಲೇ ಗೋಮಾಳ ಜಾಗ ಮೀಸಲಿಡಲಗಿತ್ತು. ಸ್ಯಾತಂತ್ರ್ಯೋತ್ತರದಲ್ಲಿ ಅದು ಅವಗಣನೆಗೆ ಬಂದಿದ್ದು ಖೇದಕರ. ಇವತ್ತು ಸಕಾರ ಮತ್ತೆ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಗೋ ಶಾಲೆ ತೆರೆಯುವದನ್ನು ಸಾರ್ವಜನಿಕ ಸಹಭಾಗಿತ್ವದೊಂದಿಗೆ ತೆರೆಯಲು ಅಪೇಕ್ಷಿಸಿದ್ದಾರೆ. ಮೇವು ಬೆಳೆಯುವುದಕ್ಕಾಗಿ ಭೂಮಿಯ ಅವಶ್ಯಕತೆ ಇದೆ. ಇತ್ತೀಚೆಗೆ ಪಶು ಸಂಗೋಪನೆ ಕಡಿಮೆ ಆಗುತ್ತಿರುವುದರಿಂದ ಫಲವತ್ತಾದ ಗೋಮಾಳ ಜಾಗಗಳು ಪರಭಾರೆಯಾಗಿ ಹೋಗುತ್ತಿವೆ. ಹಾಗಾಗಿ ಆ ಗೋಮಾಳ ಹಾಗೆಯೇ ಉಳಿಯುವಂತೆ, ಗೋ ಪ್ರೇಮಿಗಳು ಒಟ್ಟಾಗಿ ಡಿಸಿಯವರ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಗತ್ಯತೆಯನ್ನು ಗಮನಿಸಿ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿ" ಎಂದು ಸ್ವಾಮೀಜಿ ಆಗ್ರಹಿಸಿದರು.