ಕಾರ್ಕಳ, ಸೆ.29 (DaijiworldNews/PY): "ಅಭಿವೃಧ್ಧಿಗಾಗಿ ಸಾಕಾರಗೊಳ್ಳಲು ಸಂಸ್ಥೆಯು ಶ್ರಮಿಸುತ್ತಿದ್ದು ಬರುವ ದಿನಗಳಲ್ಲಿ ರೈತ ಸದಸ್ಯರ ಬೆಂಬಲದೊಂದಿಗೆ ಸಂಸ್ಥೆಯು ಇನ್ನಷ್ಟು ಬಲಿಷ್ಟಗೊಂಡು ಪ್ರಸ್ತುತ ಲಾಭಾಂಶವನ್ನ ದುಪ್ಪಟ್ಟುಗೊಳಿಸಲಿದ್ದು, ಕಾರ್ಕಳದ ರೈತ ಸದಸ್ಯರಿಗೆ ಸಂಸ್ಥೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲ್ಲಾ ತರಹದ ಕೃಷಿ ಪರಿಕರಗಳು ಹಾಗೂ ಕಡಿಮೆ ಬಾಡಿಗೆಯಲ್ಲಿ ಸಂಸ್ಥೆಯು ಒದಗಿಸಿಕೊಡುತ್ತಿರುವ ಉಳುಮೆ ಯಂತ್ರ, ಕಟಾವು ಯಂತ್ರ, ಹಾಗೂ ಸಾವಯವಗೊಬ್ಬರ ಮಾಡುವ ಯಂತ್ರದ ಪ್ರಯೋಜನವನ್ನು ರೈತ ಸದಸ್ಯರು ಪಡೆಯಬೇಕು" ಎಂದು ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಹೇಳಿದರು.
ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಇದರ 6ನೇ ವರ್ಷದ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಹಾಸಭೆಯ ತಿಳುವಳಿಕೆ ಪತ್ರ ಹಾಗೂ ಕಂಪೆನಿಯ ಪ್ರಸಕ್ತ ವರ್ಷದ ವರದಿಯನ್ನು ಕಂಪೆನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಮಿತ್ ಪಿ. ಸುವರ್ಣರವರು ಮಂಡಿಸಿದರು.
ಜಮಾ ಖರ್ಚಿನ ವಿವರ ಮತ್ತು ಅಂತಿಮ ಲೆಕ್ಕ ಪತ್ರವನ್ನು ಮಹಾಸಭೆಯಲ್ಲಿ ಅನುಮೋದನೆಗೊಂಡ ನಂತರ 2021-22ನೇ ಸಾಲಿನ ಪೂರ್ವಪರ ಬಜೆಟ್ ಬಗ್ಗೆ ಚರ್ಚಿಸಲಾಯಿತು.
ಕಂಪೆನಿಯ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡುಲ್ಕರ್ ಸ್ವಾಗತಿಸಿದರು. ಕಂಪೆನಿಯ ನಿರ್ದೇಶಕಿ ವೀಣಾ ನಾಯಕ್ ರೈತಗೀತೆ ಹಾಡಿದರು. ನಿರ್ದೇಶಕ ಕೆ.ಪಿ ಧರಣೇಂದ್ರ, ಹರೀಶ್ ಅಂಚನ್, ನಾರಾಯಣ್ ಸುವರ್ಣ, ರಘುಚಂದ್ರಜೈನ್, ಜಯಲಕ್ಷ್ಮೀ, ವಿಶ್ವನಾಥ್.ಬಿ. ಶೆಟ್ಟಿ, ಜ್ಯೋತಿಕುಲಾಲ್, ವೀಣಾ ನಾಯಕ್, ಅನಿಲ್ ಎಸ್ ಪೂಜಾರಿ, ವಿಷೇಶ ಆಹ್ವಾನಿತ ನವೀನ್ ಚಂದ್ರ ಜೈನ್ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆಯ ಮೌಲ್ಯವರ್ಧನೆಗೊಳಿಸುವಿಕೆ ಹಾಗೂ ಬೆಳೆ ವಿಮೆ ಯೋಜನೆ ಕುರಿತು ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ರಾಜ್ಯ ಸರಕಾರದ ನೂತನ ರೈತ ವಿಧ್ಯಾನಿಧಿ ಯೋಜನೆಯ ಕುರಿತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಝೀದ್, ತೇಜ್ ಶಂಕರ್, ಸಾಣೂರು ನರಸಿಂಹ ಕಾಮತ್ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಇದರ 6ನೇ ವರ್ಷದ ಮಹಾಸಭೆಗೆ ಚಾಲನೆ ನೀಡಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಉದ್ಘಾಟಿಸಿದರು.