ಮಂಗಳೂರು, ಸೆ.29 (DaijiworldNews/PY): "ಜಿಲ್ಲೆಯಲ್ಲಿ ಸಮಾಜದ್ರೋಹಿ ಶಕ್ತಿಗಳು, ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಕಾನೂನಿನ ಭಯವಿಲ್ಲದೇ ರೌಡಿಗಳು ಅಟ್ಟಹಾಸ ತೋರಿಸುತ್ತಿದ್ದಾರೆ" ಎಂದು ಮಾಜಿ ಸಚಿವ ಯು ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಒತ್ತಡದಿಂದ ನಿಸ್ಸಾಹಕವಾಗಿದೆ. ರಾಜಕೀಯ ಬಾಸ್ಗಳ ಮಾತಿಗೆ ಪೊಲೀಸರು ಗೌರವ ನೀಡಬಾರದು. ಪೊಲೀಸರು ಕಾನೂನಿಗೆ ಗೌರವ ನೀಡಬೇಕು" ಎಂದು ತಿಳಿಸಿದ್ದಾರೆ.
"ಸಂಬಂಧ ಇಲ್ಲದವರು ಯಾರ್ಯಾರ ಮಕ್ಕಳಿಗೆ ಹೊಡೆಯುತ್ತಿದ್ದಾರೆ. ಈ ರೀತಿ ಆದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಪೊಲೀಸ್ ಇಲಾಖೆಯ ಮುಂದೆಯೇ ಹೊಡಿಯುತ್ತಾರೆ. ಹೊಡಿಯಬೇಡಿ ಎಂದು ಪೊಲೀಸರು ಅಂಗಲಾಚುವ ವಿಡಿಯೋ ವೈರಲ್ ಆಗುತ್ತಿದೆ. ಪೊಲೀಸ್ ಇಲಾಖೆಯ ಲಾಠಿ ಎಲ್ಲಿ ಹೋಯಿತು?. ಪೊಲೀಸರು ಲಾಠಿ ಬಿಟ್ಟರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ದಾಳಿ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಯಾವ ಕೇಸ್ ಹಾಕಿದೆ?" ಎಂದು ಪ್ರಶ್ನಿಸಿದ್ದಾರೆ.
"ಈ ಪ್ರಕರಣದಲ್ಲಿ ಯಾರ ಒತ್ತಡ ಇತ್ತು?. ಉದ್ಯೋಗಕ್ಕಾಗಿ ಏಕೆ ಯುವಕ-ಯುವತಿಯರು ಮಂಗಳೂರಿಗೆ ಬರುತ್ತಿಲ್ಲ?. ಯಾರೋ ಒಬ್ಬ ರೌಡಿ ರೋಡಿನಲ್ಲಿ ಹೊಡೆಯುತಾರೆ ಎಂದರೆ ಯಾರಾದರೂ ಕಳುಹಿಸುತ್ತಾರಾ?. ಪೊಲೀಸರು ಆತ್ಮವಿಶ್ವಾಸ, ಧೈರ್ಯ ತುಂಬುವ ಕಾರ್ಯ ಮಾಡಬೇಕಿತ್ತು. ಆದರೆ, ಆರೋಪಿಗಳು ಬೆಳಗ್ಗೆ ಹೋಗಿ ಸಂಜೆ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ. ನಾನು ಸಚಿವನಾಗಿದ್ದಾಗ ಇಂತಹುದಕ್ಕೆ ಅವಕಾಶ ನೀಡಿಲ್ಲ. ಈ ಹಿಂದೆ ರೌಡಿಗಳಿಗೆ ಭಯವಿತ್ತು" ಎಂದಿದ್ದಾರೆ.
"ಪೊಲೀಸ್ ಇಲಾಖೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ಕೊಡುತ್ತದೆ. ರೌಡಿಗಳಿಗೆ, ಸಮಾಜದ್ರೋಹಿ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಯಾವುದೇ ಧರ್ಮದವಾಗಿದ್ದರೂ ಅವು ಸಮಾಜ ದ್ರೋಹಿ ಶಕ್ತಿಗಳು. ಇವರೇ ನಿಜವಾದ ದ್ರೋಹಿಗಳು" ಎಂದು ಹೇಳಿದ್ದಾರೆ.