ಉಪ್ಪಿನಂಗಡಿ, ಸೆ.29 (DaijiworldNews/PY): ಓಮ್ನಿ ಕಾರಿನಲ್ಲಿ ಬಂದ ಅಪರಿಚಿತನೋರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 14ರ ಬಾಲಕನನ್ನು ಹಿಡಿದೆಳೆದು ಅಪಹರಣಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿಯ ಮಠ ಹಿರ್ತಡ್ಕ ಎಂಬಲ್ಲಿ ಸೆ.28ರ ಮಂಗಳವಾರ ಸಂಜೆ ನಡೆದಿದೆ.
ಸಾಂದರ್ಭಿಕ ಚಿತ್ರ
ತಪ್ಪಿಸಿಕೊಂಡ ಬಾಲಕನನ್ನು ಹಿರ್ತಡ್ಕದ ಜನತಾ ಕಾಲನಿ ನಿವಾಸಿ ಅಬ್ದುರ್ರಹ್ಮಾನ್ ಅವರ ಪುತ್ರ, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ ತಾಜ್ ಸಿಫಾನ್ (14) ಎಂದು ಗುರುತಿಸಲಾಗಿದೆ.
ತಾಜ್ ಸಿಫಾನ್ ಮಂಗಳವಾರ ಸಂಜೆ ಬೀಡಿ ಕೊಡಲೆಂದು ಹಿರ್ತಡ್ಕದಲ್ಲಿರುವ ಬೀಡಿ ಬ್ರಾಂಚ್ಗೆ ತೆರಳಿದ್ದು, ಈ ವೇಳೆ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರೊಂದು ಬಾಲಕ ಹಿಂಬಂದಿಯಿಂದ ಬಂದಿದ್ದು, ಅದರಲ್ಲಿದ್ದಾತ ಬಾಲಕನ ಅಂಗಿಯ ಕಾಲರ್ ಹಿಡಿದೆಳೆದಿದ್ದಾನೆ. ಈ ಸಂದರ್ಭ ಬಾಲಕ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅಂಗಿಯ ಗುಂಡಿಗಳೆಲ್ಲಾ ಕಿತ್ತು ಬಂದು ಅಂಗಿ ಕಳಚಿದೆ.
ಬಾಲಕ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಅಲ್ಲೇ ಸಮೀಪದಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾನೆ. ಆ ಸಂದರ್ಭ ಕಾರು ಕೂಡಾ ಅಲ್ಲಿಂದ ಪರಾರಿಯಾಗಿದೆ. ಬಾಲಕ ಘಟನೆಯಿಂದ ಗಾಬರಿಗೊಂಡಿದ್ದು, ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎನ್ನುವ ಬಗ್ಗೆ ಆತನ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಘಟನೆಯ ಬಗ್ಗೆ ಬಾಲಕನ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿನ ಲಕ್ಷ್ಮೀ ನಗರದಲ್ಲಿಯೂ ಕೆಲ ದಿನಗಳ ಹಿಂದೆ ಇದೇ ರೀತಿ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತರು ಬಾಲಕನೋರ್ವನನ್ನು ಅಪಹರಿಸಲು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದ್ದು, ಇದೀಗ ಮತ್ತೆ ಬಾಲಕರನ್ನು ಅಪಹರಿಸಲು ಯತ್ನಿಸುತ್ತಿರುವುದು ಪರಿಸರದಲ್ಲಿ ಆತಂಕ ಸೃಷ್ಟಿಸಿದೆ.