ಮಂಗಳೂರು, ಸೆ 29 (DaijiworldNews/MS): ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಖಚಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು ನಿಯಮ ಉಲ್ಲಂಘಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತ ಶ್ರೀಧರ್ ತಿಳಿಸಿದ್ದಾರೆ.
ಲಾಕ್ಡೌನ್ ತೆರವುಕೊಂಡ ಬಳಿಕ, ಶಾಲಾ-ಕಾಲೇಜುಗಳು ಆರಂಭವಾಗಿದೆ. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಹೊಟೇಲ್, ಸುಪರ್ ಮಾರ್ಕೇಟ್, ಇನ್ನಿತರ ಜನನಿಬಿಡ ಪ್ರದೇಶಗಳಿಗೆ ಅನುಮತಿ ನೀಡಲಾಗಿದೆ. ಅನುಮತಿ ಕೊಡುವಾಗ ಕೋವಿಡ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ 10 ದಿನಗಳಿಗೆ ಅಲ್ಲಿನ ಎಲ್ಲಾ ಕೆಲಸಗಾರರ ಕೋವಿಡ್ ಪರೀಕ್ಷೆ ನಡೆಸಬೇಕು ಎಂಬ ನಿಯಮ ಹಾಕಲಾಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಹೊರ ರಾಜ್ಯದ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಕಣ್ಣಿಟ್ಟು, ಅವರು ಊರಿಗೆ ಹೋಗುವುದು ಬರುವುದು ಮಾಡುವಾಗ ಕಡ್ಡಾಯ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿ ಅವರನ್ನು ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಇದ್ದಾಗಲೂ ಕೂಡಾ ಕೆಲವು ಶಿಕ್ಷಣ ಸಂಸ್ಥೆಗಳು ಕಾನೂನನ್ನು ಪಾಲಿಸುತ್ತಿಲ್ಲ, ಕೆಲವು ವಸತಿ ಬಡಾವಣೆ, ಮಾಲ್ಗಳಲ್ಲಿ ಕೋವಿಡ್ ಪರೀಕ್ಷೆಗೆ ಅನುಮತಿ ಕೊಡದೆ, ಮ.ನ.ಪಾ. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳಿಗೆ ಅಸಹಕಾರ ವ್ಯಕ್ತಪಡಿಸುವ ಬಗ್ಗೆ ವರದಿ ಆಗುತ್ತಿದೆ.
ಸಾರ್ವಜನಿಕರು, ಶಿಕ್ಷಣ ಸಂಸ್ಥೆಯವರು, ಬಡಾವಣೆಯ ನಿವಾಸಿಗಳು, ಕೋವಿಡ್ ಖಚಿತ ಪರೀಕ್ಷೆಗೆ ಅನುವು ಮಾಡಿಕೊಟ್ಟು ಮೂರನೇ ಅಲೆಯನ್ನು ನಿಯಂತ್ರಿಸಲು ಮ.ನ.ಪಾ.ದ ಜೊತೆ ಕೈ ಜೋಡಿಸಬೇಕು. ತಪ್ಪಿದಲ್ಲಿ Epidemic Act ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.