ಉಡುಪಿ, ಸೆ. 28 (DaijiworldNews/SM): ಮಲ್ಪೆ ಬೀಚ್ಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸೇರಿದಂತೆ ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.
ಅವರು ಇಂದು ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಲ್ಪೆ ಬೀಚ್ಗೆ ದೇಶ ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರಿಗೆ ಅನುಕೂಲಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕಲ್ಪಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ನೋಡಿಕೊಳ್ಳಬೇಕು ಎಂದರು.
ಮಲ್ಪೆ ಬೀಚ್ನಲ್ಲಿ ಈಗಾಗಲೆ ಕೈಗೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಪ್ರವಾಸಿಗರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲ್ಪೆ ಬೀಚ್ ನಲ್ಲಿ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸಮಗ್ರ ಅಭಿವೃದ್ದಿಯ ನೀಲ ನಕಾಶೆಯನ್ನು ಮುಂದಿನ 20 ವರ್ಷದ ಕಲ್ಪನೆಯೊಂದಿಗೆ ತಯಾರಿಸಲು, ಸಮಾಲೋಚಕರೊಂದಿಗೆ ಚರ್ಚಿಸಿ ಶೀಘ್ರವಾಗಿ ಕರಡು ತಯಾರಿಸಿ ತಿಳಿಸಬೇಕು ಎಂದರು.
ಮಲ್ಪೆ ಬೀಚ್ ಪ್ರದೇಶದಿಂದ ಸೈಂಟ್ಮೆರಿಸ್ ದ್ವೀಪಕ್ಕೆ ಹೋಗುವ ಸ್ಪೀಡ್ಬೋಟ್ಗಳು, ಮಲ್ಪೆ ಬಂದರಿನಿಂದ ಹೋಗುವ ದೊಡ್ಡ ಬೋಟ್ಗಳು, ಮಲ್ಪೆ ಬೀಚ್ ಪ್ರದೇಶದಲ್ಲಿ ರೌಂಡಿಂಗ್ ಬೋಟ್ ಹಾಗೂ ವಾಟರ್ ಸ್ಕೂಟಿ ಬೋಟುಗಳು ಮತ್ತಿತರ ಜಲಕ್ರೀಡೆಗಳನ್ನು ನಡೆಸಲು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ,ಅವುಗಳಿಗೆ ಚಾಲನೆ ನೀಡುವಂತೆ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಬೀಚ್ ಗೆ ಬರುವ ಪ್ರವಾಸಿಗರಿಗೆ ಸಮುದ್ರದ ಅಪಾಯದ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಪ್ರಾಣಾಪಾಯಗಳು ಆಗುತ್ತಿವೆ ,ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಸಮುದ್ರ ತೀರದಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಬೇಕು,ಒಂದೊಮ್ಮೆ ಅಪಾಯಕ್ಕೆ ಒಳಗಾದವರನ್ನು ರಕ್ಷಿಸಲು ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸೂಚನೆ ನೀಡಿದರು.