ಉಡುಪಿ, ಸೆ 28 (DaijiworldNews/MS): ಇತ್ತೀಚೆಗೆ ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ಮತಾಂತರದ ಆರೋಪ ಪದೇ ಪದೇ ಕೇಳಿ ಬರುತ್ತಿದ್ದು, ಯಾವುದೇ ಪುರಾವೆ ಇಲ್ಲದೆ ಸುಳ್ಳು ಆರೋಪ ಮಾಡಿ ಸಮಾಜದಲ್ಲಿ ದ್ವೇಷದ ವಿಷ ಬೀಜವನ್ನು ಬಿತ್ತುತ್ತಿರುವುದು ಖಂಡನೀಯ, ಕ್ರೈಸ್ತ ಸಮುದಾಯ ಎಂದಿಗೂ ಕೂಡ ಅಮಿಷದ ಅಥವಾ ಬಲವಂತದ ಮತಾಂತರವನ್ನು ವಿರೋಧಿಸುತ್ತದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕ್ರೈಸ್ತ ಹಕ್ಕುಗಳ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
ಅವರು ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಎಲ್ಲಿಯೂ ಬಲವಂತದ ಅಥವಾ ಆಮೀಷ ಒಡ್ಡಿ ಮತಾಂತರ ಮಾಡುವ ಕೆಲಸ ನಡೆಯುತ್ತಿಲ್ಲ. ಕಾನೂನಾತ್ಮಕ ವಾಗಿ ಮತಾಂತರವಾಗಲು ಅವಕಾಶ ಇದೆ . ಮತಾಂತರದ ಘಟನೆ ನಡೆಯುತ್ತಿದ್ದರೆ, ಇಂತಹ ಸಂಘಟನೆಗಳಿಗೆ, ಪೊಲೀಸ್ ಇಲಾಖೆಯೆ ನೇರವಾಗಿ ದಾಳಿ ಮಾಡಲು ಪರವಾನಿಗೆ ನೀಡಿದ್ದಾರಾ? ಪೊಲೀಸ್ ಇಲಾಖೆಯ ಪರವಾನಿಗೆ ಇಲ್ಲದೆ ಇದ್ದರೆ ಯಾಕೆ ಇಂತಹ ಸಂಘಟನೆಗಳ ಮೇಲೆ ಸ್ವಯಂಪ್ರೇರಿತ ಕೇಸನ್ನು ಯಾಕೆ ದಾಖಲಿಸ ಬಾರದು? ಎಂದು ಅವರು ಪ್ರಶ್ನಿಸಿದರು.
ಕ್ರೈಸ್ತ ಸಮುದಾಯ ಸಮಾಜದಲ್ಲಿ ಉತ್ತಮ ವ್ಯಕ್ತಿಗಳ ರೂಪಿಸಲು ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದೆ. ಈಗಾಗಲೇ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಜನ ಶಿಕ್ಷಣವನ್ನು ಪಡೆದಿದ್ದಾರೆ. ಅಲ್ಲಿ ಯಾರನ್ನು ಕೂಡ ಬಲವಂತ ಮಾಡಿ ಅಥವಾ ನೀವು ಮತಾಂತರ ಆದರೆ ಮಾತ್ರ ನಿಮಗೆ ಶಿಕ್ಷಣ ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ.
ಇತ್ತೀಚೆಗೆ ನಡೆದ ಕಾರ್ಕಳ ಕ್ರೈಸ್ತ ಪ್ರಾರ್ಥನಾ ಕೇಂದ್ರದಲ್ಲಿ ಅಂತಹ ಘಟನೆ ನಡೆದಿಲ್ಲ. ಮನಸ್ಸಿನ ನೆಮ್ಮದಿ ಶಾಂತಿ, ಸಮಾಧಾನಕ್ಕೋಸ್ಕರ ಯಾರೂ ಯಾವ ಧರ್ಮದ ಮಂದಿರಕ್ಕೂ ಹೋಗಬಹುದು. ಅದು ಮತಾಂತರ ಆಗುವುದಿಲ್ಲ. ಸಂಘಟನೆಗಳಿಗೆ ನಿಜವಾದ ಕಾಳಜಿ ಬಡವರ ದೀನ ದಲಿತರ ಮೇಲಿದ್ದರೆ ಮೊದಲು ಅವರಿಗೆ ಅಸ್ಪೃಶ್ಯತೆಯಿಂದ ಕಾಣುವುದನ್ನು ನಿಲ್ಲಿಸಲಿ, ಇಂತಹ ದಾಳಿಗಳು ಮುಂದುವರೆಯಲು ಅವಕಾಶ ನೀಡದೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪೊಲೀಸ್ ಇಲಾಖೆಯೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಕಣ್ಣುಮುಚ್ಚಿ ಕುಳಿತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕು ಎಂದು ಪ್ರಶಾಂತ್ ಜತ್ತನ್ನ ಆಗ್ರಹಿಸಿದರು.
ಡಾ ನೇರಿ ಕರ್ನೆಲಿಯೋ, ಅಧ್ಯಕ್ಷ ರು, IFKCA, ಲುವಿಸ್ ಲೋಬೋ, ಗೌರವಾಧ್ಯಕ್ಷರು, IFKCA, ರೋಬೋಟ್ ಮಿನೇಜಸ್, ಕಾರ್ಕಳ, ಪೀಟರ್ ದಾಂತಿ, ಕಾರ್ಯದರ್ಶಿ, ಭಾರತೀಯ ಕ್ರೈಸ್ತ ಒಕ್ಕೂಟ, ಗ್ಲಾಡ್ಸನ್ ಕಾರ್ಕಡ, ಸಂಯೋಜಕರು, ಭಾರತೀಯ ಕ್ರೈಸ್ತ ಒಕ್ಕೂಟ , ಥೋಮಸ್ ಸುವಾರಿಸ್, ಟ್ರಸ್ಟಿ, ಎಸ್ ಎಮ್ ಒ ಎಸ್ ಕ್ಯಾಥೆಡ್ರಲ್ ಬ್ರಹ್ಮಾವರ ಉಪಸ್ಥಿತರಿದ್ದರು.