ಮಂಗಳೂರು, ಸೆ 28 (DaijiworldNews/MS): ಮಂಗಳೂರು ವಿಭಾಗದ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕರಾಗಿದ್ದ ಬಾಗಲಕೋಟೆಯ ಹುನಗುಂದದ ನಿಂಗಪ್ಪ ಇಮರಾಪುರ ಸೆ. 26 ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂದು ನಿಂಗಪ್ಪ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ನಿಂಗಪ್ಪ ಕುಟುಂಬಸ್ಥರು
ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದವರಾದ ನಿಂಗಪ್ಪ ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು. ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ಮನೆಯವರಿಗೆ ಕರೆ ಮಾಡಿ ಮೇಲಾಧಿಕಾರಿಗಳು ಕ್ಷುಲ್ಲಕ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.
6 ತಿಂಗಳಾದರೂ ಸಸ್ಪೆಂಡ್ ವಾಪಸ್ ಪಡೆಯದ ಕಾರಣ ಹಣಕಾಸಿನ ಸಮಸ್ಯೆಯಾಗಿತ್ತು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಮನೆಯವರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.
ಈ ಆರೋಪವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತಳ್ಳಿಹಾಕಿದ್ದು, ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕರ್ತವ್ಯ ಲೋಪ ಎಸಗುತ್ತಿದ್ದರು. ಈ ಕಾರಣಕ್ಕೆ ಅಮಾನತು ಮಾಡಿದ್ದು ಸಸ್ಪೆಂಡ್ ರಿವೋಕ್ ಕೂಡ ಆಗುವ ಹಂತದಲ್ಲಿತ್ತು. ಇನ್ನು ವೈಯುಕ್ತಿಕ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ಹೇಳಿದ್ದಾರೆ.
ಇನ್ನು ಮೃತ ನಿಂಗಪ್ಪ ಕುಟುಂಬಸ್ಥರು ತಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ ಬಳಿ ಮೃತದೇಹದೊಂದಿಗೆ ಆಗಮಿಸಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.