ಉಡುಪಿ, ಸೆ.27 (DaijiworldNews/HR): ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳು, ಐದ್ಯುತ್ ಮಸೂದೆ ತಿದ್ದುಪಣ ರದ್ದತಿಗಾಗಿ, ಕೃಷಿ ಉತ್ಪನ್ನಗಳಗೆ ಕನಿಷ್ಠ ಬಿ೦ಬಲ ಬಿಲೆ, ಕಾನೂನು, ಜಾಲಗಾಲ, ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಹಲವಾರು ಸಂಘಟನೆಗಳು ಒಟ್ಟಾಗಿ ಭಾರತ್ ಬಂದ್ ಅನ್ನು ಬೆಂಬಲಿಸಿ ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದರು.
ಆ ಪ್ರಯುಕ್ತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿಯ ಜೋಡುಕಟ್ಟೆಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಡಯಾನಾ ಸರ್ಕಲ್ ಮಾರ್ಗವಾಗಿ- ಮತ್ತೆ ಜೋಡುಕಟ್ಟೆಗೆ ಸರ್ಕಲ್ ಬಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, "ರಾಜ್ಯದ ಯಾವುದೇ ಸಚಿವರು ಯಾರು ಕೂಡ ರೈತರ ಪರವಾಗಿ ಮಾತಾಡುವಂತದ್ದು ಕಂಡಿಲ್ಲ, ರೈತರು ದೆಹಲಿಯಲ್ಲಿ ಹಲವರಾರು ದಿನಗಳ ಕಾಲ ಮುಷ್ಕರ ಹೂಡಿದರೂ ಕೂಡ ಯಾರು ಅವರನ್ನ ಮಾತನಾಡಿಸುವ ಸೌಜನ್ಯತೆ ತೋರಿಸಲಿಲ್ಲ . ಮುಂದೆ ಜನರು ಈ ಸರಕಾರಕ್ಕೆ ತಕ್ಕ ಪಾಠ ಕಳಿಸುತ್ತಾರೆ, ಕಾಂಗ್ರೆಸ್ ಯಾವಾಗಲು ರೈತರಿಗೆ ಬೆಂಬಲವಾಗಿ ನಿಲ್ಲುತ್ತದೆ" ಎಂದರು.
ಸಿಐಟಿಯು ನ ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ, "ಕೋವಿಡ್ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರಿಗೆ ಬಂದ್ ನಿಂದ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಉಡುಪಿ ಬಂದ್ ಮಾಡುವ ವಿಚಾರ ಕೈ ಬಿಟ್ಟೆವು. ರೈತಾಪಿ ಕೃಷಿಯನ್ನು ನಾಶ ಮಾಡಿ 'ಕೃಷಿ'ಯ ನೀತಿಯನ್ನು ಕಾರ್ಪೋರೇಟ್ ಕಂಪನಿಗಳ ಪರ ರೂಪಿಸುತ್ತಿದೆ. ಅದಾನಿ- ಅಂಬಾನಿಗೆ ಸೇರಿದ ದೊಡ್ಡ ದೊಡ್ಡ ಕಂಪನಿಗಳಿಗೆ ಲಾಭ ಮಾಡಿ ಕೊಳ್ಳಲು ಸಹಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಕೃಷಿ ಭೂಮಿಯನ್ನು ಮತ್ತು ಮಾರುಕಟ್ಟೆಯನ್ನು ಶ್ರೀಮಂತರು, ಕಾರ್ಪೊರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ 'ಭೂ ಸುಧಾರಣಾ ಕಾಯ್ದೆ ತಿದ್ದುಪಡಿ', 'ಎಪಿಎಂಸಿ ಕಾಯ್ದೆ ತಿದ್ದುಪಡಿ', ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿಕೂಲಿಕಾರರು ಹಾಗೂ ದಲಿತರು, ಅಲ್ಪಸಂಖ್ಯಾತರ ಬದುಕು, ಆಹಾರದ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ "ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು, ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿರುವ ಜನರಿಗೆ ನೋವಿನ ಮೇಲೆ ಬರಿಯ ಎಳೆದಂತಾಗಿದೆ ಎಂದರು
ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್, ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ , ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಸುಶೀಲ ನಾಡ, ಮುಸ್ಲಿಂ ಸಂಘಟನೆಯ ಮುಖಂಡರಾದ ಇದ್ರಿಸ್ ಹೂಡೆ, ರೈತ ಪರ ಸಂಘಟನೆಯ ಶಶಿಧರ್ ಗೊಲ್ಲ, ಕಿಸಾನ್ ಸಂಘದ ಎರ್ಮಾಳು ಶಶಿಧರ್ ಶೆಟ್ಟಿ, ಪಿ ಎಫ್ ಐ ನ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ , ಎಸ್ ಡಿ ಪಿ ಐ ನ ಪ್ರಧಾನ ಕಾರ್ಯದರ್ಶಿ ಮಜೀದ್ ಉಚ್ಚಿಲ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಕವಿರಾಜ್, ಕಟ್ಟಡ ಕಾರ್ಮಿಕ ಸಂಘಟನೆಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.