ಕಡಬ, ಸೆ.27 (DaijiworldNews/HR): ಕಡಬ ಪೊಲೀಸ್ ಸಿಬ್ಬಂದಿಯೊಬ್ಬ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ, ಆಕೆ ಗರ್ಭರ್ವತಿಯಾಗಲು ಕಾರಣನಾಗಿ ಬಳಿಕ ಆತನ ಉಸ್ತುವಾರಿಯಲ್ಲೇ ಅಬಾರ್ಷನ್ ಮಾಡಲಾಗಿದೆ ಎನ್ನಲಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಎಎಸ್ಪಿ ಕಡಬ ಠಾಣೆಗೆ ಆಗಮಿಸಿ ಪೊಲೀಸ್ ಸಿಬ್ಬಂದಿಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಕಡಬ ಪೊಲೀಸ್ ಠಾಣೆ
ಪೊಲೀಸ್ ಸಿಬ್ಬಂಧಿಯು ಸಾರ್ವಜನಿಕರ ರಕ್ಷಣೆಗೆಂದು ಇರುವವರು, ಅವರೇ ಸಮಾಜದಲ್ಲಿ ಮಾಡಬಾರದ ಕೆಲಸವನ್ನು ಮಾಡಿದರೆ, ಜನರ ರಕ್ಷಣೆ ಮಾಡುವವರು ಯಾರು? ಇಂತಹ ಒಬ್ಬರಿಂದಾಗಿ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. ಇಂತಹ ಕೆಲಸ ಮಾಡಿದವರಿಗೆ ಶಿಕ್ಷೆ ಆಗಬೇಕು. ಮುಂದೆ ಇಂತಹ ತಪ್ಪು ಕೆಲಸ ಮಾಡುವವರಿಗೆ ಇದೊಂದು ಪಾಠ ಆಗಬೇಕು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಇದೇ ವ್ಯಾಪ್ತಿಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದು, ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿದ ತಕ್ಷಣ ಪ್ರಕರಣವನ್ನು ಮುಚ್ಚಿ ಹಾಕಲು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾನೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ.
ನ್ಯಾಯಕ್ಕಾಗಿ ಠಾಣೆಗೆ ಬರುವ ಮಹಿಳೆಯರೇ ಈ ಪೊಲೀಸ್ ಸಿಬ್ಬಂದಿಗೆ ಟಾರ್ಗೆಟ್ ಎನ್ನಲಾಗಿದ್ದು, ಹಲವಾರು ಕುಟುಂಬ ಕಲಹ, ಪತಿಯಿಂದ ಸಮಸ್ಯೆ ಬೇರೆ ಬೇರೆ ಸಮಸ್ಯೆಗಳಲ್ಲಿ ಠಾಣೆಗೆ ನ್ಯಾಯ ಅರಸುತ್ತಾ ಬರುವವರನ್ನು ಈತ ತನ್ನ ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾನೆ ಎನ್ನಲಾಗಿದೆ.
ಇನ್ನು ಕಡಬ ಠಾಣೆಯ ಅಧಿಕಾರಿ ಈ ಪೊಲೀಸ್ ಸಿಬ್ಬಂದಿಯ ವಿಷಯ ತಿಳಿದು ಎಚ್ಚರಿಕೆ ನೀಡಿದ್ದರೂ, ಈತ ತನ್ನ ಚಾಳಿ ಮುಂದುವರಿಸಿದ್ದಾನೆ. ಇತನ ಕೆಲಸಗಳನ್ನು ಪತ್ರಕರ್ತರು ವರದಿ ಮಾಡುತ್ತಾರೆ ಎಂದು ಗೊತ್ತಾದ ತಕ್ಷಣ ಪತ್ರಕರ್ತರೊಬ್ಬರಿಗೆ ಇದೇ ಪೊಲೀಸ್ ಸಿಬ್ಬಂದಿ ವರದಿ ಮಾಡದಂತೆ ದುಂಬಾಲು ಬೀಳುವ ವಿಡಿಯೋ ಕೂಡ ವೈರಲ್ ಆಗಿದೆ.
ಈ ಪ್ರಕರಣದ ಸಂಬಂಧ ಪುತ್ತೂರು ಎಎಸ್ಪಿ ಗಾನಾ ಪಿ. ಕುಮಾರ್ ಪ್ರತಿಕ್ರಿಯಿಸಿ, "ವಿಷಯ ನಮ್ಮ ಗಮನಕ್ಕೆ ಬಂದಿದ್ದು, ನೊಂದ ಯುವತಿ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖ ಮಾಡಿ ದೂರು ನೀಡಿದರೆ ಆರೋಪಿಯ ವಿರುದ್ಧ ಕ್ರಮ ಜರುಗಿಸಲಾಗುವುದು" ಎಂದು ಹೇಳಿದ್ದಾರೆ.