ಮಂಗಳೂರು,ಸೆ 27(DaijiworldNews/MS): ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆಯಾಗಿರುವ ಕಂಬಳದ ಸುಧಾರಣೆಗಾಗಿ 'ಕಂಬಳ ಅಕಾಡೆಮಿ ಸ್ಥಾಪನೆ' ಸಹಿತ ಹಲವು ಶಿಫಾರಸುಗಳನ್ನು ಒಳಗೊಂಡ ವಿಸ್ತೃತ ವರದಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಾಂತೀಯ ಅಧ್ಯಕ್ಷ ಡಾ.ಕೆ ಮಿತ್ತಲ್ ಸಿದ್ಧಪಡಿಸಿರುವ ವರದಿಯಲ್ಲಿ ಕಂಬಳ ಕ್ರೀಡೆಯತ್ತ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಕಂಬಳ ಉತ್ಸವದಲ್ಲಿ ಸುಧಾರಣೆ, ಪ್ರೋತ್ಸಾಹ, ಕೋಣ ತಳಿಗಳ ಸಂರಕ್ಷಣೆ, ಕಂಬಳ ಓಟಗಾರರ ಜೀವನಮಟ್ಟ ಸುಧಾರಣೆಗೆ ಯೋಜನೆಗಳು ಸಹಿತ ಕೆಲವು ಶಿಫಾರಸುಗಳನ್ನು ಒಳಗೊಂಡಿದ್ದು, ಇದನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ
ಕಂಬಳ ಕ್ರೀಡೆ ಆಯೋಜಕರು ನೀಡಿರುವ ಮನವಿ ಸಲಹೆ ಹಾಗೂ ಶಿಫಾರಸುಗಳನ್ನು ವಿವಿಧ ಕಾರ್ಯ ಯೋಜನೆಗಳ ಮೂಲಕ ಪರಿಗಣಿಸಲು ಉತ್ತಮವಾಗಿದ್ದುಇವುಗಳನ್ನು ಅನುಷ್ಠಾನಗೊಳಿಸಬಹುದಾಗಿದೆ ಎಂದು ಮಿತ್ತಲ್ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಮೂಡಬಿದ್ರೆ, ಬೈಂದೂರು, ಮಿಯಾರು ಹಾಗೂ ಪೈವಳಿಕೆಗಳಲ್ಲಿ ಕಂಬಳ ಓಟಗಾರರ ತರಬೇತಿ ಕೇಂದ್ರ ಕಂಬಳ ಅಕಾಡೆಮಿ ಸ್ಥಾಪನೆ ಕಂಬಳ ಓಟಗಾರರ ಮತ್ತು ತರಬೇತಿ ಕೇಂದ್ರಗಳು, ಕಂಬಳ ಕೋಣಗಳಿಗಾಗಿ ಗೋಮಾಳ, ಕಂಬಳ ಆಯೋಜನೆಗೆ ಸಕಾಲದಲ್ಲಿ ಅನುಮತಿ, ಕಂಬಳ ಪ್ರಾಧಿಕಾರದ ಸ್ಥಾಪನೆ, ವಿಮೆ ಸಹಿತ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಮಿತ್ತಲ್ ಇತ್ತೀಚಿಗೆ ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಪಶುಸಂಗೋಪನಾ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಕಂಬಳ ಸಮಿತಿ ಹಾಗೂ ಉತ್ಸವ ಆಯೋಜಕರಿಗೆ ಸಭೆ ನಡೆಸಿದ್ದು ವಿವಿಧ ಅಂಶಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ತಯಾರಿಸಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಕ್ರೀಡಾ ಸಚಿವ ನಾರಾಯಣಗೌಡ ಅವರಿಗೆ ಸಲ್ಲಿಸಿ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಒತ್ತಾಯಿಸಿದ್ದಾರೆ.