ಕಾರ್ಕಳ, ಸೆ. 26 (DaijiworldNews/SM): ಅಧಿಕಾರಕ್ಕೆ ಬರಲೆಂದೇ ಧಾರ್ಮಿಕ ಕೇಂದ್ರವನ್ನು ನೆಲಸಮಗೊಳಿಸಿದ ಬಿಜೆಪಿಯು ಇದೀಗ ಅಧಿಕಾರದ ಮದದಲ್ಲಿ ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ನೆಲಸಮಗೊಳಿಸುತ್ತಿದೆ. ಧಾರ್ಮಿಕ ಪುಣ್ಯ ಕ್ಷೇತ್ರಗಳ ವಿರುದ್ಧ ಗದಾಪ್ರಹಾರ ನಡೆಸುವುದು ಬಿಜೆಪಿಯ ಧರ್ಮ ರಕ್ಷಣೆಯಾಗಿದೆ ಧರ್ಮ ರಕ್ಷಣೆಯೇ ನನ್ನ ಮೂಲ ಉದ್ದೇಶವೆಂದು ಡಂಗುರ ಸಾರಿದ ಸಚಿವ ವಿ.ಸುನೀಲ್ಕುಮಾರ್ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನ್ನ ತತ್ವ-ಸಿದ್ಧಾಂತಕ್ಕೆ ಬದ್ಧರಾಗಬೇಕೆಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಸವಾಲು ಹಾಕಿದರು.
ಕಾರ್ಕಳ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಸಹಭಾಗಿತ್ವದಲ್ಲಿ ರಾಜ್ಯ ಸರಕಾರದ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಕೆಡವುದರ ವಿರುದ್ದ ಜನಜಾಗೃತಿಗಾಗಿ ನಗರದಲ್ಲಿ ಹಮ್ಮಿಕೊಂಡ ಪಂಜಿನ ಮೆರವಣಿಗೆ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಸಿಸಿ ಅವರು ಮಾತನಾಡಿದರು.
ಬಿಜೆಪಿಯ ಅಧಿಕಾರವಧಿಯಲ್ಲಿ ಹಿಂದುತ್ವ ಅಪಾಯದ ಸ್ಥಿತಿಯಲ್ಲಿದೆ. ಯೆಡಮೊಗ್ಗೆಯ ಉದಯ ಗಾಣಿಗ, ಬ್ರಹ್ಮಾವರದ ಪ್ರವೀಣ್ ಪೂಜಾರಿ ಕೊಲೆತನ ಬಿಜೆಪಿಗರ ಧರ್ಮ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ನಿಮ್ಮದೇ ಆಳ್ವಿಕೆ ಇದೆಯಲ್ಲವೇ? ಅವತ್ತು ಬೊಬ್ಬಿರಿದವರು ಈಗ ನ್ಯಾಯ ಒದಗಿಸಿ. ಮೊದಲ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಹೆಬ್ರಿಯ ಸುಚೇತಾ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು. ತಾವು ಇಂಧನ ಸಚಿವರಾಗಿದ್ದೀರಿ. ನಂದಿತಾ ಕೊಲೆ ಪ್ರಕರಣದ ವಿರುದ್ದ ಹೋರಾಡಿದ ಅರಗ ಜ್ಞಾನೇಂದ್ರರು ಗೃಹಸಚಿವರು. ಈಗಲಾದರೂ ನ್ಯಾಯ ಒದಗಿಸಿ. ಮೈಸೂರಿನಲ್ಲಿ ಅತ್ಯಾಚಾರದ ವಿರುದ್ದ ಹೋರಾಟ ನಡೆಸಲು ಶೋಭ ಕರಂದ್ಲಾಜೆಗೆ ಬಿಡುವಿಲ್ಲವೇ? ಎಂದು ಕಿಡಿಕಾರಿದರು. ಮೊಟ್ಟೆ ಹಗರಣ ಮಾಡಿದ ಶಾಸಕಿಯಿಂದ ದೇವಸ್ಥಾನದ ಹುಂಡಿಯನ್ನು ದೇವರೇ ಕಾಪಾಡಬೇಕು ಎಂದರು.
ಪೊಲೀಸರು ಸಚಿವರ ಒತ್ತಡಕ್ಕೆ ಮಣಿದು ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದರೆ ಸುನಿಲ್ ಕುಮಾರ್ ಮೇಲೆ ಕೇಸು ದಾಖಲಿಸಲು ಗೊತ್ತಿದೆ. ಮುಂದಿನ ಅವಧಿಗೆ ಸಚಿವ ಕಾರ್ಕಳದಲ್ಲಿ ರಿನಿವಲ್ ಆಗೋದಿಲ್ಲ . ನಳಿನ್ ಕುಮಾರ್ ಓರ್ವ ಒಬ್ಬ ಸಂಚುಕೋರ ರಾಜಕಾರಣಿ. ಅವರ ಸಾಧನೆ ಎಂದರೆ ಪಂಪ್ವೆಲ್ ಉರುಳಿಸಿದ್ದು, ಕಟ್ಟಿದ್ದು. ದೇವಸ್ಥಾನ ಒಡೆದವರು ಹೆಸರಿನ ಮುಂದೆ ಕಟೀಲ್ ಎಂದು ಸೇರಿಸಿಕೊಳ್ಳಲು ಆರ್ಹರಲ್ಲ. ನಳಿನ್ ಕುಮಾರ್ ಪಂಪ್ವೆಲ್ ಎಂದು ನೆಮ್ ಪ್ಲೆಟ್ ಬದಲಾಯಿಸಿ ಎಂದರು.
ನಾರಾಯಣ ಗುರು ಸ್ವಾಮಿಯ ತತ್ವ-ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧ
ಒಂದೇ ಜಾತಿ,ಒಂದು ಮತ,ಒಂದು ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ತತ್ವ ಸಿದ್ಧಾಂತವನ್ನು ಕಾಂಗ್ರೆಸ್ ಪಕ್ಷ ಅನುಸರಿಸುತ್ತಾ ಬಂದಿದೆ. ಸಮಸ್ತ ನಾಗರಿಕರಿಗೆ ಹಕ್ಕು ಕಾನೂನು ದೇಶ ವ್ಯಾಪ್ತಿಯಲ್ಲಿ ತಂದಿರುವ ಕೀರ್ತಿ ಕಾಂಗ್ರೆಸ್ನದಾಗಿದೆ ಎಂದು ಇದೇ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಸುದೀರ್ ಮರೋಳಿ ಅಭಿಮತ ವ್ಯಕ್ತಪಡಿಸಿದರು.
ಸಚಿವರ ಮೌನದ ಗುಟ್ಟೇನು?
ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಗಳಾದ ದೇವರು, ದೇವಸ್ಥಾನ, ಗೋವು ವಿಚಾರ ಹಿಡಿದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರಿಯಾದ ಅಧಿಕಾರವನ್ನಂತೂ ನೀಡಲಿಲ್ಲ ಕನಿಷ್ಟ ದೇವಸ್ಥಾನವನ್ನು ನಿಮ್ಮಿಂದ ಉಳಿಸಲಾಗಲಿಲ್ಲ. ಶಾಸಕ, ಸಚಿವ ಅವಧಿಯಲ್ಲಿ ಗೋಕಳ್ಳತನ ಪ್ರಕರಣ ಹೆಚ್ಚುತಿದ್ದು ಸಚಿವರ ಮೌನದ ಗುಟ್ಟೇನು ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಪ್ರಸ್ತಾವನೆಗೈದು ಪ್ರಶ್ನಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಸದಾಶಿವ ದೇವಾಡಿಗ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ನಾಗರಾಜ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗಿಶ್ ಇನ್ನಾ, ಉಪಸ್ಥಿತರಿದ್ದರು.