ಮಂಗಳೂರು, ಸೆ.26 (DaijiworldNews/HR): ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರವು ಶೇಕಡಾ 2 ಕ್ಕಿಂತಲೂ ಕಡಿಮೆಯಾಗಿದ್ದು, ಜಿಲ್ಲಾಡಳಿತವು ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತೆ ಪ್ರಾರಂಭಗೊಂಡಿದೆ.
ಕೊರೊನಾದ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ದೇಶದಾದ್ಯಂತ ಇದ್ದಂತೆ ಜಿಲ್ಲೆಯಲ್ಲಿ ಕೂಡ ಪ್ರವಾಸೋದ್ಯಮಕ್ಕೆ ನಿರ್ಬಂಧಗಳನ್ನು ಹೇರಲಾಗಿತ್ತು. ಆದರೆ ಈಗ ನಿರ್ಬಂಧಗಳನ್ನು ಸಡಿಲಗೊಳಿಸಿ ಲಾಕ್ಡೌನ್ ತೆಗೆದುಹಾಕುವುದರಿಂದ ಮನೆಗಳಿಗೆ ಸೀಮಿತವಾಗಿದ್ದ ಜನರು ಉತ್ಸಾಹದಿಂದ ಮತ್ತೆ ಪ್ರಯಾಣ ಕೈಗೊಂಡಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಖಾಸಗಿ ವಿಮಾನಗಳ ಮೂಲಕ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.
ಸೆಪ್ಟೆಂಬರ್ 26 ರಂದು ಪುಣೆಯಲ್ಲಿರುವ ಒಂದು ಕುಟುಂಬದ 13 ವ್ಯಕ್ತಿಗಳು ಖಾಸಗಿ ವಿಮಾನದಲ್ಲಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿದರು. ಸುಮಾರು 11.30 ಕ್ಕೆ ಜೆಟ್ ಬಂದಿತು, ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ಸ್ವಾಗತಿಸಿದರು.
ಪ್ರವಾಸಿಗರು ಮೂಡುಬಿದಿರೆಯ ಸಾವಿರಕಂಬದ ಬಸದಿ, ಮತ್ತು ಕಾರ್ಕಳ, ಕಟೀಲ್, ಬಪ್ಪನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದು, ಅವರು ಸೆಪ್ಟೆಂಬರ್ 27 ಸೋಮವಾರ ಮಡಿಕೇರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ದೈಜಿವರ್ಲ್ಡ್ ಜೊತೆ ಮಾತನಾಡಿದ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮಾಜಿ ಸಿಇಒ ಯತೀಶ್ ಬೈಕಂಪಾಡಿ, "ಪ್ರವಾಸಿಗರು ತಮ್ಮ ಖಾಸಗಿ ಜೆಟ್ಗಳಲ್ಲಿ ಮಂಗಳೂರಿಗೆ ಬರುತ್ತಿರುವುದು ಇದೇ ಮೊದಲಲ್ಲ. ಇಂದು ಆಗಮಿಸಿದ ಪ್ರವಾಸಿಗರನ್ನು ಪ್ರವಾಸೋದ್ಯಮ ಇಲಾಖೆ ಸ್ವಾಗತಿಸಿದೆ. ಪ್ರವಾಸೋದ್ಯಮವು ಈಗಾಗಲೇ ಆರಂಭಗೊಂಡಿದ್ದು, ಜೀವನವು ಸಹಜ ಸ್ಥಿತಿಗೆ ಮರಳಿದೆ" ಎಂದರು.