ಉಡುಪಿ, ಸೆ.25 (DaijiworldNews/HR): ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ, ಉಡುಪಿ ರತ್ನಶ್ರೀ ಆರೋಗ್ಯಧಾಮ ಉದ್ಘಾಟನಾ ಸಮಾರಂಭ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಉಜಿರೆ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸಾಟಿಯ ಅಧ್ಯಕ್ಷರಾದ ಪರಮ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಬಂದರು, ಶಿಪ್ಪಿಂಗ್, ಜಲಸಾರಿಗೆ ಮತ್ತು ಆಯುಷ್ ಖಾತೆಯ ಸಚಿವ ಸರ್ಬಾನಂದ ಸೋನಾವಾಲ್ರವರು ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಆಸ್ಪತ್ರೆಯ ನೀರೀಕ್ಷಣ ಕೊಠಡಿಯಲ್ಲಿರುವ ಸರಸ್ವತಿ ವಿಗ್ರಹ ಹಾಗೂ ಶೃಂಗಾರ (ಆಸ್ತೆಟಿಕ್ ಮೆಡಿಸಿನ್) ವಿಭಾಗವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆಯವರು ಉದ್ಘಾಟಿಸಿದರು. ಡಿಲಕ್ಸ್ ವಾರ್ಡ್ (ಹೆಲ್ತ್ ಕಾಟೇಜ್)ನ್ನು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್, ಸ್ಪೆಷಲ್ ವಾರ್ಡ್ನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರವರು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವು ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಆಯುರ್ವೇದದ ಮಹತ್ವ, ಪ್ರಪಂಚದೆಲ್ಲೆಡೆ ಪ್ರಸರಿಸಿದೆ ಎಂದು ನುಡಿದರು.
ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈ ಹಿಂದೆ ಆಯುರ್ವೇದ ಔಷಧಿ ಕೊನೆಯ ಆಯ್ಕೆ ಆಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಆಯುರ್ವೇದ ಮೊದಲ ಆಯ್ಕೆ ಆಗುತ್ತಿದೆ, ಚಿಕಿತ್ಸೆಯು ಫಲಕಾರಿಯಾಗುತ್ತಿದೆ. ಹಾಗೇ ವಿಶ್ವ ಮಾನ್ಯತೆ ಕೂಡಾ ದೊರೆಯುತ್ತಿದೆ. ಆಯುರ್ವೇದದಿಂದ ರೋಗದ ಚಿಕಿತ್ಸೆಯಲ್ಲದೆ, ರೋಗ ನಿರೋಧಕ ಶಕ್ತಿಯೂ ಕೂಡಾ ವೃದ್ಧಿಯಾಗುತ್ತದೆ. ಇದರಿಂದ ಕೊರೋನಾ, ಕ್ಯಾನ್ಸರ್ನಂತಹ ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ ಎಂದರು.
ಇದೇ ಸಮಯದಲ್ಲಿ ಕಟ್ಟಡ ವಿನ್ಯಾಸಕರಾದ ಗೋಪಾಲ ಭಟ್ ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಎಮ್.ಡಿ. ಗಣೇಶ್ರವರಿಗೆ ಸನ್ಮಾನವನ್ನು ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೇಂದ್ರ ಆಯುಷ್ ಖಾತೆ ಸಚಿವ ಸರ್ಬಾನಂದ ಸೋನಾವಾಲ್ರವರು ಮಾತನಾಡಿ, "ಆಯುರ್ವೇದವು ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ವೈಜ್ಞಾನಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಪೂರ್ಣ ಹೆಜ್ಜೆ ಇಟ್ಟಿದೆ ಹಾಗೂ ಆಯುಷ್ ಇಲಾಖೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದು ನುಡಿದರು.
ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸಾಟಿಯ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಶ್ರೀ ಡಿ. ಹರ್ಷೇಂದ್ರ ಕುಮಾರ್, ಹಾಸನ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ನರಸಿಂಹ ರಾವ್ರವರು ಉಪಸ್ಥಿತರಿದ್ದರು.