ಕಾಸರಗೋಡು, ಸೆ.25 (DaijiworldNews/HR): ಆನ್ಲೈನ್ ಗೇಮ್ನಂತಹ ಸೈಬರ್ ಅಪರಾಧಗಳಿಗೆ ತುತ್ತಾದ ಮಕ್ಕಳ ಪುನಶ್ಚೇತನಕ್ಕೆ ಪೊಲೀಸರ ನೇತೃತ್ವದಲ್ಲಿ ಡಿಜಿಟಲ್ ಡೀ ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಲಾಗುವುದು. ಇದು ಪೊಲೀಸ್ ಠಾಣೆಗಳನ್ನು ಶಿಶು ಸೌಹಾರ್ದವಾಗಿಸುವ ಯೋಜನೆಯ ಜೊತೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಕೇರಳ ಪೊಲೀಸರ ವಿವಿಧ ಯೋಜನೆಗಳ, ನೂತನ ಕಟ್ಟಡಗಳ ಉದ್ಘಾಟನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಕಳೆದ 5 ವರ್ಷಗಳಲ್ಲಿ ಈ ಹಿಂದೆ ನಡೆಯದೇ ಇರುವಷ್ಟು ಬೃಹತ್ ಪ್ರಮಾಣದಲ್ಲಿ ರಾಜ್ಯದಲ್ಲಿ ಬದಲಾವಣೆ ತರಲಾಗಿದೆ. ಪೊಲೀಸ್ ಠಾಣೆಗಳನ್ನು ಜನಪರಗೊಳಿಸುವುದು, ಪೊಲೀಸರಿಗೆ ಜನಸೇವೆಯ ಮುಖ ಒದಗಿಸುವ ಯತ್ನ ಸಫಲವಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಮಾದರಿ ಚಟುವಟಿಕೆಗಳನ್ನು ಪೊಲೀಸರು ನಡೆಸುತ್ತಿದ್ದಾರೆ. ಓಖಿ, ನೆರೆ ಹಾವಳಿ ಇತ್ಯಾದಿ ನಡೆದ ವೇಳೆ ಸಂರಕ್ಷಣೆಗೆ ಪೊಲೀಸರು ಜನತೆಯ ಜತೆಗಿದ್ದರು ಎಮದು ಅವರು ತಿಳಿಸಿದರು.
ರಾಜ್ಯ ಪೊಲೀಸ್ ವರಿಷ್ಠ ಅನಿಲ್ ಕಾಂತ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಡಿ.ವೈ.ಎಸ್.ಪಿ. ಕಚೇರಿಗಳ ಸಹಿತ 5 ಕ ಡೆ ಪೊಲೀಸ್ ಠಾಣೆಗಳಲ್ಲಿ ಸಂದರ್ಶಕರ ಕೊಠಡಿ ಉದ್ಘಾಟನೆಗೊಂಡಿದ್ದು, 2 ಪೊಲೀಸ್ ಠಾಣೆಗಳಿಗೆ ನೂತನ ಕಟ್ಟಡಗಳಲ್ಲಿ ಚಟುವಟಿಕೆ ಆರಂಭಗೊಂಡಿವೆ. ಕಾಸರಗೋಡು, ವಿದ್ಯಾನಗರ, ಬದಿಯಡ್ಕ, ಚೀಮೇನಿ ಪೊಲೀಸ್ ಠಾಣೆಗಳಲ್ಲಿ, ಕಾಸರಗೋಡು ಡಿ.ವೈ.ಎಸ್.ಪಿ. ಠಾಣೆಯಲ್ಲಿ ಸಂದರ್ಶಕರ ಕೊಠಡಿ
ತೆರೆಯಲಾಗಿದೆ.
ಕಾಸರಗೋಡು ಪೊಲೀಸ್ ಟಾಣೆಯ ನವೀಕೃತ ನೂತನ ಕಟ್ಟಡದ ಶಿಲಾಫಲಕವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅನಾವರಣಗೊಳಿಸಿದರು. ಸಂದರ್ಶಕರ ಕೊಠಡಿಯನ್ನೂ ಅವರು ತೆರೆದರು. ಠಾಣೆಗೆ ಪಲ್ಸ್ ಆಕ್ಸೀಮೀಟರ್ ನ್ನು ಅವರು ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ ಝಮೀರಾ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ 5 ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರಗಳು ಸಜ್ಜುಗೊಂಡಿವೆ. ಕುಂಬಳೆ, ವಿದ್ಯಾನಗರ, ಅಂಬಲತ್ತರ, ಬೇಡಗಂ, ಬೇಕಲ ಠಾಣೆಗಳಲ್ಲಿ ಹೆತ್ತವರೊಂದಿಗೆ ಠಾಣೆಗಳಿಗೆ ಆಗಮಿಸುವ ಮಕ್ಕಳಿಗಾಗಿ ಭಯವಿಲ್ಲದೆ ವಿಹರಿಸಲು, ಟೀವಿ ವೀಕ್ಷಣೆಗೆ , ಪುಸ್ತಕ ವಾಚನ, ಚಿತ್ರರಚನೆ ಸಹಿತ ಶಿಶು ಸೌಹಾರ್ದ ಕೇಂದ್ರಗಳು ಸಜ್ಜುಗೊಂಡಿವೆ.
ಅಂಬಲತ್ತರ ಪೊಲೀಸ್ ಠಾಣೆಯ ಶಿಶು ಸೌಹಾರ್ದ ಕೇಂದ್ರವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಕೆ.ಅರವಿಂದನ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಸಿ.ಕೆ.ಸಬಿತಾ, ಐ.ಪಿ.ಎಸ್ಎಚ್.ಒ. ರಂಜಿತ್ ರವೀಂದ್ರನ್, ಎಸ್.ಐ. ಕೆ.ವಿ.ಮಧುಸೂದನನ್, ಎ.ಎಸ್.ಐ.ಟಿ.ದಿನೇಶ್
ಮೊದಲಾದವರು ಉಪಸ್ಥಿತರಿದ್ದರು.
ಇನ್ನು ಕುಂಬಳೆ ಪೊಲೀಸ್ ಠಾಣೆಯ ಶಿಶು ಸೌಹಾರ್ದ ಕೇಂದ್ರವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸುಫ್, ಪಂಚಾಯತ್ ಸದಸ್ಯೆ ಪ್ರೇಮಾವತಿ ಮೊದಲಾದವರು ಉಪಸ್ಥಿತರಿದ್ದರು.