ಮಂಗಳೂರು, ಸೆ.25 (DaijiworldNews/HR): ರಂಗಾಯಣ ಮೈಸೂರು ಸಹಯೋಗದೊಂದಿಗೆ ಕನ್ನಡ ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲೆ ಪ್ರಾಯೋಜಕತ್ವದಲ್ಲಿ ಜರ್ನಿ ಥೇಟರ್ ಗ್ರೂಪ್(ರಿ.) ಮಂಗಳೂರು ಆಯೋಜಿಸಿದ ರಂಗಭೀಷ್ಮ ಬಿ. ವಿ. ಕಾರಂತರ ಜನ್ಮದಿನದ ಪ್ರಯುಕ್ತ 'ರಂಗನಮನ' ರಂಗಸಂಗೀತ ಹಾಗೂ ರಂಗದೃಶ್ಯಾವಳಿ ಕಾರ್ಯಕ್ರಮ ಬಜಾಲ್ ನ ಸಂತ ಜೋಸೆಫರ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಿರಿಯ ರಂಗಕರ್ಮಿ ಐ. ಕೆ. ಬೊಳುವಾರ್ ಹಾಗೂ ರಂಗನಿರ್ದೇಶಕ ಜಗನ್ ಪವಾರ್ ಉಪಸ್ಥಿತರಿದ್ದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐ. ಕೆ. ಬೊಳುವಾರ್ ಬಿ. ವಿ., "ಕಾರಂತರ ಒಡನಾಟದ ನೆನಪುಗಳನ್ನು ಮೆಲುಕು ಹಾಕುತ್ತಾ ರಂಗ ಸಂಗೀತವು ನಿಗದಿತ ಚೌಕಟ್ಟಿನೊಳಗೆ ಶಾಸ್ತ್ರೀಯವಾಗಿರುವಂತಹದ್ದಲ್ಲ. ಅದು ಸಾಮಾನ್ಯನನ್ನೂ ಸೆಳೆಯುವಂತಹ ಶಕ್ತಿಯುಳ್ಳದ್ದು ಮತ್ತು ಎಲ್ಲರೂ ಹಾಡುವಂತೆ ಸುಲಲಿತವಾದ ಪ್ರಬೇಧ. ಕಾರಂತರು ಈ ನೆಲೆಯಲ್ಲಿಯೇ ರಂಗಸಂಗೀತವನ್ನು ನಾಟಕಗಳಲ್ಲಿ ಬಳಸಿದವರು" ಎಂದು ಹೇಳಿದರು.
ಜಗನ್ ಪವಾರ್ ಮಾತನಾಡಿ, "ಕಾರಂತರು ಜಂಗಮರಂತೆ ಇದ್ದುದರಿಂದ ರಂಗಭೂಮಿಯಲ್ಲಿ ಅನನ್ಯವಾಗಿ ಕಾಣಿಸುತ್ತಾರೆ. ಯಾವುದೇ ಶಾಸ್ತ್ರೀಯತೆಯಲ್ಲಿ ಸ್ಥಿರಗೊಳ್ಳದೆ ನಿರಂತರ ಚಲನಶೀಲ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದ ಕಾಂತರ ಜಂಗಮ ನಿಲುವು ರಂಗಭೂಮಿಯವರೆಲ್ಲರಿಗೂ ಆದರ್ಶ" ಎಂದು ಹೇಳಿದರು.
ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಪ್ರಮೀಳಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸುನಿತಾ ಉಪಸ್ಥಿತರಿದ್ದರು. ಜರ್ನಿ ಥೇಟರ್ ಗ್ರೂಪ್ (ರಿ.) ನ ಅಧ್ಯಕ್ಷೆ ಭವ್ಯಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಂಘ-ಸಂಸ್ಥೆಯ ಕಲಾವಿದರಿಂದ ರಂಗಸಂಗೀತ ಮತ್ತು ರಂಗದೃಶ್ಯಾವಳಿ ಕಾರ್ಯಕ್ರಮ ನಡೆಯಿತು.