ಉಡುಪಿ, ಸೆ.25 (DaijiworldNews/PY): "ರೈತ ಹೋರಾಟಗಾರರೊಂದಿಗೆ ಈಗಾಗಲೇ 11 ಸುತ್ತಿನ ಮಾತುಕತೆ ಆಗಿದೆ. ಮತ್ತೊಮ್ಮೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ" ಎಂದು ಕೃಷಿ ಹಾಗೂ ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ.
ರೈತ ಸಂಘಟನೆಗಳು ಸೋಮವಾರ ಭಾರತ್ ಬಂದ್ಗೆ ಕರೆ ನೀಡಿರುವ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕೇಂದ್ರ ಸರ್ಕಾರ ರೈತ ಹೋರಾಟಗಾರರ ಜೊತೆ ಮತ್ತೊಮ್ಮೆ ಮಾತುಕತೆಗೆ ಸಿದ್ದವಾಗಿದೆ. ಕೇಂದ್ರ ಕೃಷಿ ಬಿಲ್ನಿಂದ ಲಾಭ ಏನು ನಷ್ಟ ಏನು ಎನ್ನುವ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ" ಎಂದಿದ್ದಾರೆ.
"ಚರ್ಚೆ ನಡೆಸದೇ ಇದ್ದಲ್ಲಿ ಲಾಭ ಹಾಗೂ ನಷ್ಟದ ಬಗ್ಗೆ ತಿಳಿಯುವುದಿಲ್ಲ. ಕೇಂದ್ರದ ಬಿಲ್ ಅನುಷ್ಠನಾ ಮಾಡಿದ ರಾಜ್ಯಗಳ ರೈತರಿಗೆ ಲಾಭ ಆಗಿದೆ. ರೈತ ಹೋರಾಟಗಾರರು ಆ ರಾಜ್ಯದ ವರದಿಯನ್ನು ತರಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
"ರೈತರ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಇಲ್ಲ. ರೈತರ ವಿಚಾರದಲ್ಲಿ ಧರ್ಮ ಹಾಗೂ ಪಕ್ಷಗಳು ಇಲ್ಲ. ದೇಶಕ್ಕೆ ಅನ್ನ ನೀಡುವ ರೈತರೊಂದಿಗೆ ಚರ್ಚೆಗೆ ಸಿದ್ದ" ಎಂದು ತಿಳಿಸಿದ್ದಾರೆ.