ಬಂಟ್ವಾಳ, ಸೆ.25 (DaijiworldNews/PY): ಮಂಗಳೂರು-ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಗಾಯಗೊಂಡವರನ್ನು ಮಂಹಳೂರು ನಿವಾಸಿಗಳಾದ ಶರತ್, ಶ್ರೀರಾಮ್, ಆನಂದಿತ್, ಶುಸಾನ್ ಹಾಗೂ ಶ್ರೀರಾಮ್ ಎಂದು ಗುರುತಿಸಲಾಗಿದೆ.
ಈ ಐದು ಮಂದಿ ಕಿರುಚಿತ್ರವೊಂದರ ಶೂಟಿಂಗ್ ಸಲುವಾಗಿ ಬೆಳಗ್ಗೆ ಸ್ವಿಫ್ಟ್ ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಮಲ್ ಕಟ್ಟೆ ಎಂಬಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಐವರು ಪ್ರಯಾಣಿಕರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.