ಬಂಟ್ವಾಳ, ಸೆ. 24 (DaijiworldNews/SM): ಉಡುಪಿ-ಕಾಸರಗೋಡು ೪೦೦ಕೆ.ವಿ. ವಿದ್ಯುತ್ ಮಾರ್ಗ ರಚನೆಗೆ ನಿರಪೇಕ್ಷಣ ಪತ್ರವನ್ನು ಪಂಚಾಯಿತಿಗಳು ನೀಡಬಾರದೆಂಬ ಬೇಡಿಕೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ವಿಟ್ಲ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಪಂಚಾಯಿತಿಗಳಿಗೆ ಸಲ್ಲಿಸಲಾಯಿತು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯುತ್ ಮಾರ್ಗ ಹಾದು ಹೋಗುವ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಯಾವುದೇ ಕಾರಣಕ್ಕೂ ಕಂಪನಿಗೆ ವಿದ್ಯುತ್ ಮಾರ್ಗ ರಚನೆಗೆ ನಿರಪೇಕ್ಷಣಾ ಪತ್ರ ನೀಡಬಾರದೆಂಬ ರೈತರ ಬೇಡಿಕೆಯನ್ನು ಸಲ್ಲಿಸಲಾಗುವುದು. ಇದನ್ನು ನಿರ್ಲಕ್ಷಿಸಿ ಪಂಚಾಯಿತಿಗಳು ಒಪ್ಪಿಗೆ ನೀಡಿದಲ್ಲಿ ಪಂಚಾಯಿತುಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ, ವೀರಕಂಬ, ಅನಂತಾಡಿ, ವಿಟ್ಲಮುಡ್ನೂರು, ಕೇಪು, ಪುಣಚ, ಅಳಿಕೆ ಗ್ರಾಮ ಪಂಚಾಯಿತಿಗಳಿಗೆ ರೈತ ಸಂಘದ ನಿಯೋಗ ಬೇಟಿ ನೀಡಿ ಮನವಿ ಸಲ್ಲಿಸುವ ಕಾರ್ಯ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು, ಪುಣಚ ವಲಯ ಅಧ್ಯಕ್ಷ ಇಸುಬು ಪುಣಚ, ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಎಂ., ರೋಹಿತಾಶ್ವ ಭಂಗ ವೀರಕಂಬ, ಕೃಷ್ಣ ಪ್ರಸಾದ್ ವಿ., ಸಂತ್ರಸ್ತ ರೈತರಾದ ಚೋಮಣ್ಣ ಮಂಜನಾಡಿ, ಅಣ್ಣು ಗೌಡ, ಭಾಸ್ಕರ ಗೌಡ, ಸಂಜೀವ ಎಂ., ವಿಶುಕುಮಾರ್ ಎಂ., ಡೊಂಬ್ಬಯ್ಯ ಗೌಡ, ಆನಂದ ಗೌಡ, ಸ್ಟಾನಿ ಮಸ್ಕರೇನಿಯಸ್, ರಮಾನಂದ ಶೆಟ್ಟಿ, ಸುಭಾಷ್ ರೈ, ಶಿವರಾಮ ಮತ್ತಿತರರು ಹಾಜರಿದ್ದರು.