ಕಾರ್ಕಳ, ಸೆ.24 (DaijiworldNews/PY): "ಕೊರೊನಾ ತೀವ್ರತೆಯ ಕಾಲಘಟ್ಟದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಸವಲತ್ತುಗಳನ್ನು ಕಲ್ಪಿಸುವ ಜೊತೆಗೆ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ವಿವಿಧ ದಾನಿಗಳು, ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಮ್ಲಜನಕ ಘಟಕವೊಂದು ಸಿದ್ಧಗೊಂಡಿದೆ ಆ ಮೂಲಕ ರಾಜ್ಯಕ್ಕೆ ಕಾರ್ಕಳ ಮಾದರಿ ಎನ್ನಿಸಿದೆ" ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಅಧ್ಯಕ್ಷ ನಾಡೋಜಾ ಡಾ. ಜಿ.ಶಂಕರ್ ಮತ್ತು ಸಂಘ-ಸಂಸ್ಥೆಗಳ ಮತ್ತು ದಾನಿಗಳ ಸಹಕಾರದಿಂದ ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 300 ಎಲ್ಪಿಎಮ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಮೊದಲನೇ ಹಂತದಲ್ಲಿ ಕೊರೊನಾ ಸಂಕಷ್ಟ ಎದುರಾದಾಗ 3,500 ಮಂದಿ ಮುಂಬೈಯಿಂದ ಊರಿಗೆ ಬಂದಾಗ 37 ಕ್ವಾರೆಂಟೈನ್ ಕೇಂದ್ರಗಳನ್ನು ಸ್ಥಾಪನೆಗೈದು ಸುಮಾರು 1 ತಿಂಗಳ ಕಾಲ ಅದರ ನಿರ್ವಹಣೆಯ ಜೊತೆಗೆ ಅಲ್ಲಿ ವಾಸ್ತವ್ಯ ಇದ್ದ ಎಲ್ಲರಿಗೂ ಉಪಹಾರ, ಭೋಜನ ಹಾಗೂ ವಾಸ್ತವ್ಯಕ್ಕೆ ಅಗತ್ಯ ಇರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಇದರ ಸವಲತ್ತನ್ನು ಪರವೂರಿಗೆ ತೆರಳಬೇಕಾಗಿದ್ದವರಿಗೂ ವಿಸ್ತರಿಸಲಾಗಿತ್ತು. ಅದರ ಸತ್ಕಾರ್ಯವು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಗೆ ಸಲ್ಲುತ್ತದೆ" ಎಂದರು.
ಎರಡನೇ ಹಂತದ ಕೊರೊನಾ ಸಂಕಷ್ಟದ ಕಾಲದಲ್ಲಿ 10,594 ಮಂದಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬೇರೆ ಬೇರೆ ಹಂತದಲ್ಲಿ ಚಿಕಿತ್ಸೆ ಪಡೆದಿದ್ದರು. ನೇರವಾಗಿ 856 ಮಂದಿ ಒಳರೋಗಿಗಳಾಗಿ ಹಾಗೂ 230 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದರು. ಇಷ್ಟೊಂದು ಮಂದಿ ಸವಲತ್ತು ಪಡೆದಿರುವುದಕ್ಕೆ ಆಸ್ಪತ್ರೆಯ ವೈದ್ಯರ, ದಾದಿಯರ ಹಾಗೂ ಸಿಬ್ಬಂದಿಗಳ ದಕ್ಷ ಕಾರ್ಯ ಶ್ಲಾಘನೀಯ ಎಂದರು.
ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಸಾಮಾಜಿಕ ಜಾಲಗಳಲ್ಲಿ ಭಾರೀ ಅಪಪ್ರಚಾರ ನಡೆದಿತ್ತು. ಅದಕ್ಕೆ ಮೊದಲಾಗಿ ತುತ್ತಾದವರು ಜನಪ್ರತಿನಿಧಿಗಳು.ದೇಶ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲಸಿಕೆ ಅಭಿಯಾನ ನಡೆದಾಗಲೂ ಅದರ ಕುರಿತು ಅಪಪ್ರಚಾರ ನಡೆದಿತ್ತು. ಲಸಿಕೆಯನ್ನು ಬಿಜೆಪಿಯವರು ಮಾತ್ರವೇ ಪಡೆಯಲಿ ಎಂದಿದ್ದರು. ಆ ನಂತರದಲ್ಲಿ ಲಸಿಕೆಗಾಗಿ ಮುಗಿಬಿದ್ದರು, ಲಸಿಕೆ ಸಿಗುವುದಿಲ್ಲ ಎಂಬ ಆರೋಪವೂ ನಡೆಸಿದ್ದರು ಎಂದು ಹೇಳಿದರು.
1ನೇ ಡೋಸ್ ಲಸಿಕೆಯು ತಾಲೂಕಿನಲ್ಲಿ 1,53,453 ಜನ ಪಡೆದಿದ್ದಾರೆ. ಅಂದರೆ ಶೇ.90 ಜನ ಪಡೆದಿದ್ದಾರೆ. 2ನೇ ಹಂತದ ಡೋಸ್ ಲಸಿಕೆಯನ್ನು 66,256 ಮಂದಿ ಶೇ.60ರಷ್ಟು ಮಂದಿ ಪಡೆದಿದ್ದಾರೆ. ಲಸಿಕಾ ಅಭಿಯಾನದಲ್ಲಿ ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಕ್ರಿಯಾರಾಗಿದ್ದಾರೆ ಎಂದರು.
"ಸರಕಾರದ ಕಾರ್ಯಕ್ರಮಗಳ ಜೊತೆಗೆ ಸಂಘ-ಸಂಸ್ಥೆಗಳು, ದಾನಿಗಳು ಸಹಕಾರಿಯಾದರೆ ಯೋಜನೆಗಳು ಇನ್ನಷ್ಟು ಪ್ರಚಲಿತವಾಗಲಿದೆ" ಎಂಬ ಅಭಿಮತ ವ್ಯಕ್ತಪಡಿಸಿದರು.
ರಾಜಾಪುರ ಸಾರಸ್ಪತ ಕ್ರೆಡಿಟ್ ಕೋ-ಅಪರೇಟಿವ್ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ, "ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದಾನ,ಧರ್ಮ ಮಾಡಿದಾಗ ಸಂತೃಪ್ತಿ ದೊರಕುತ್ತದೆ. ದಾನಿಗಳ ಸೇವೆ ಸಾರ್ಥಕತೆಯಾಗಲಿ. ದಾನವನ್ನು ಪಡೆದವರು ಸದುಪಯೋಗ ಪಡಿಸಿಕೊಂಡಾಗ ಸಮಾಜ ಸುಭೀಕ್ಷೆಯಾಗಲು ಸಾಧ್ಯ" ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರ್ನಾಟಕ ಗೋಡಂಬಿ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವ , ಬೋಳ ಆಗ್ರೋ ಪ್ರೈ.ಲಿ.,ನ ಬೋಳ ದಾಮೋದರ್ ಕಾಮತ್ ಶುಭಾಂಶನೆಗೈದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ತಹಶೀಲ್ದಾರ್ ಪ್ರಕಾಶ್ ಮರವಳ್ಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ತ, ತಾಲೂಕು ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಸುಬ್ರಹಣ್ಯ ರಾವ್, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮ ಕೇಶವ, ಉಪಾಧ್ಯಕ್ಷೆ ಪಲ್ಲವಿ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಶಿವಕುಮಾರ್ ಪ್ರಾರ್ಥನೆಗೈದರು. ಶಶಾಂಕ್ ಸ್ವಾಗತಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಜಾಲ್ಸೂರ್ ನಿರೂಪಿಸಿದರು. ಡಾ. ಮಾನಸ ಧನ್ಯವಾದವಿತ್ತರು.