ಮಂಗಳೂರು, ಸೆ.24 (DaijiworldNews/PY): "ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಿಕ್ಬ್ಯಾಕ್ ಪಡೆಯಲಾಗಿದೆ" ಎಂದು ಮಂಗಳೂರು ಮನಪಾ ವಿಪಕ್ಷ ನಾಯಕ ಎ.ಸಿ ವಿನಯರಾಜ್ ಹಾಗೂ ಮಾಜಿ ಶಾಸಕ ಜೆ ಆರ್ ಲೋಬೋ ಆರೋಪಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಂಗಳೂರು ಸ್ವಚ್ಛವಾಗಿರಬೇಕು ಎನ್ನುವುದು ಎಲ್ಲರ ಇಚ್ಛೆ. ಆದರೆ, ಸ್ವಚ್ಛತೆಗಾಗಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲಿ ಕಿಕ್ ಬ್ಯಾಕ್ ಪಡೆದುಕೊಳ್ಳುವುದಕ್ಕೆ ನಮ್ಮ ಸಹಮತವಿಲ್ಲ. ಕಾಂಗ್ರೆಸ್ ಇದರ ವಿರುದ್ದ ಹೋರಾಟ ನಡೆಸಲಿದೆ" ಎಂದಿದ್ದಾರೆ.
ಎ. ಸಿ ವಿನಯರಾಜ್ ಮಾತನಾಡಿ, "ಆಂಟನಿ ವೇಸ್ಟ್ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಪಡೆದುಕೊಂಡಿತ್ತು. 2022ರ ಜನವರಿಗೆ ಮನಪಾ ಹಾಗೂ ಆಂಟನಿ ವೇಸ್ಟ್ ಮಧ್ಯೆ ಕರಾರು ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಮನಪಾ ಆಡಳಿತವು ಕಾಂಗ್ರೆಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ 52 ಕೋಟಿ ರೂ. ಮೊತ್ತದ ಹೊಸ ಯೋಜನೆಗೆ ಅನುಮೋದನೆ ಪಡೆದುಕೊಂಡಿದೆ" ಎಂದು ತಿಳಿಸಿದ್ದಾರೆ.
"ಉಪ್ಪಿನಂಗಡಿ, ಕಾರ್ಕಳ, ಎಂಆರ್ಪಿಎಲ್, ಸಹ್ಯಾದ್ರಿ, ಕ್ಷೇಮ, ಬೈಕಂಪಾಡಿ ಕೈಗಾರಿಕಾ ವಲಯ ಹಾಗು ಅನೇಕ ಕಡೆ ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಂಸ್ಕರಣೆಯಲ್ಲಿ ರಾಮಕೃಷ್ಣ ಮಠಕ್ಕೆ ಅನೇಕ ವರ್ಷದ ಅನುಭವವಿದೆ. ಕಳೆದ ಐದು ವರ್ಷಗಳಲ್ಲಿ ರಾಮಕೃಷ್ಣ ಮಠದ ಸುಮಾರು 11 ಸಾವಿರ ಕಾರ್ಯಕರ್ತರು ಮಂಗಳೂರು ಮಹಾನಗರ ಸಹಿತ ಜಿಲ್ಲೆಯ ವಿವಿಧ ಕಡೆ ಶ್ರಮದಾನದ ಮೂಲಕ ತ್ಯಾಜ್ಯ ಸಂಗ್ರಹಿಸಿದ್ದಾರೆ. ಪಾಲಿಕೆಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ರಾಮಕೃಷ್ಣ ಮಠದವರು ಆಸಕ್ತಿ ಮನವಿ ಸಲ್ಲಿಸಿದ್ದರೂ ಬಿಜೆಪಿಯ ಮಂಗಳೂರು ಮನಪಾ ಆಡಳಿತವು ಮಠಕ್ಕೆ ಆ ಜವಾಬ್ದಾರಿ ವಹಿಸದೇ ಬೇರೆ ಕಂಪೆನಿಗೆ ನೀಡಲು ಮುಂದೆ ಬಂದಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಈ ವಿಚಾರದ ಬಗ್ಗೆ ತನಿಖೆ ನಡೆಯಬೇಕು" ಎಂದು ಒತ್ತಾಯಿಸಿದ್ದಾರೆ.
"ರಾಮಕೃಷ್ಣ ಆಶ್ರಮದ ಸ್ಟಾರ್ಟ್ ಅಪ್ ಸಂಸ್ಥೆ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯು ಈಗಿನ ಗುತ್ತಿಗೆ ಸಂಸ್ಥೆಗೆ ನೀಡುತ್ತಿರುವ ಮೊತ್ತ ನೀಡಿದರೆ ಸಾಕು. ಐದು ವರ್ಷಗಳಲ್ಲ ಕಸ ವಿಲೇವಾರಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿ ಪಾಲಿಕೆಗೆ ನೀಡುವುದಾಗಿ ತಿಳಿಸಿದೆ. ಆದರೆ, ಬಿಜೆಪಿ ಆಡಳಿತವು ಈ ವಿಚಾರವಾಗಿ ರಾಮಕೃಷ್ಣ ಆಶ್ರಮದಿಂದ ವಿಸ್ತೃತ ವರದಿ ಪಡೆದುಕೊಳ್ಳದೇ ನಿರ್ಲಕ್ಷ್ಯ ಮಾಡಿದೆ" ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಪೋರೇಟರ್ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಪ್ರವೀಣ್ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ಕೇಶವ, ಮನಪಾ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.