Karavali
ಕುಂದಾಪುರ: ಸಿಹಿನೀರು ಮೀನು ಸಾಕಾಣಿಕೆಯಲ್ಲಿ ಸಾಧನೆಗೈದ ಸತೀಶ ಹೆಗಡೆ
- Fri, Sep 24 2021 12:09:50 PM
-
ಕುಂದಾಪುರ, ಸೆ.24 (DaijiworldNews/PY): ಶ್ರದ್ದೆ ಮತ್ತು ಆಸಕ್ತಿ ಕೃಷಿಯಲ್ಲಿ ಯಶಸ್ಸು ಸಾಧಿಸುವ ಸುಲಭ ಮಾರ್ಗ. ಹೊಸತನವನ್ನು ಅಳವಡಿಸಿಕೊಳ್ಳುವ ತಹತಹಿಕೆ, ಪ್ರಯೋಗಶೀಲ ಗುಣಗಳು ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಲು ಸಾಧ್ಯ ಎನ್ನುವುದಕ್ಕೆ ರಟ್ಟಾಡಿಯ ಯುವ ಕೃಷಿಕ ಸತೀಶ ಹೆಗಡೆ ಅವರೇ ಸಾಕ್ಷಿ. ಪರಿಶ್ರಮ, ಆತ್ಮವಿಶ್ವಾಸದಿಂದ ಪ್ರಯತ್ನ ಮಾಡಿದರೆ ಬರಡು ಭೂಮಿಯನ್ನೂ ಬಂಗಾರ ಮಾಡಲು ಸಾಧ್ಯ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ.
ಸತೀಶ ಹೆಗಡೆ ಅವರ ಕೃಷಿ ವಿಶೇಷ ಎಂದರೆ ಸಮಗ್ರ ಕೃಷಿ ಮತ್ತು ಸಾಂಸ್ಥಿಕ ಕೃಷಿ. ಸತೀಶ ಹೆಗಡೆಯವರ ಕೃಷಿತಾಕುವಿನಲ್ಲಿ ಬಹುವಿಧ ಕೃಷಿ ಇದೆ. ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ದತಿ ಇಲ್ಲಿದೆ. ಪ್ರಧಾನವಾಗಿ ಅಡಿಕೆ ಕೃಷಿಯಲ್ಲಿ ಪ್ರಯೋಗಶೀಲತೆ ಹಲವಾರು ತಳಿಯ ಅಡಿಕೆ ಮರಗಳನ್ನು ಇಲ್ಲಿ ಕಾಣಬಹುದು. ಪಶ್ಚಿಮ ಘಟ್ಟ ಭಾಗದಲ್ಲಿ ಅಪರೂಪದ್ದಾದ ಸಿಹಿನೀರು ಮೀನುಗಾರಿಕೆಯನ್ನೂ ಮಾಡಿ ಇವರು ಗಮನ ಸಳೆದಿದ್ದಾರೆ. ಬಹುಶಃ ಯಶಸ್ವಿ ಕೃಷಿಕನ ವಿಶೇಷತೆಯೇ ದೂರಗಾಮಿ ಆಲೋಚನೆ ಹಾಗೂ ಬಹುಶ್ರುತ ವ್ಯಕ್ತಿತ್ವ.
ಸತೀಶ ಹೆಗಡೆ ಅವರ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಅಡಿಕೆ ಮರಗಳಿವೆ. 350ಕ್ಕು ಅಧಿಕ ತೆಂಗಿನ ಮರಗಳಿವೆ. ಬಾಳೆ, ಗೇರು ಮುಂತಾದ ಬೆಳೆಗಳಿವೆ. ಹೈನುಗಾರಿಕೆ ಇದೆ. ನಾಟಿ ಕೋಳಿ ಸಾಕಾಣಿಕೆ ಇದೆ.
ರಟ್ಟಾಡಿಯ ಶಿವರಾಮ ಹೆಗಡೆ ಮತ್ತು ಗುಲಾಬಿ ಹೆಗಡೆ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಪಿಯುಸಿ ಶಿಕ್ಷಣ ಪಡೆದು, ಇಲೆಕ್ಟ್ರಿಕಲ್ ವಿಷಯದಲ್ಲಿ ಡಿಪ್ಲಮೋ ಮಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅವರಿಗೆ ಬಿ.ಎಸ್.ಎನ್.ಎಲ್ನಲ್ಲಿ ಕೆಲಸ ಲಭಿಸಿದರೂ ಅವರಿಗೆ ಅದರಲ್ಲಿ ತೃಪ್ತಿ ಕಾಣಲಿಲ್ಲ. ಅವರ ಮುಂದೆ ಇದ್ದುದು ಕೃಷಿ. ಪರಂಪರಾನುಗತವಾಗಿ ಬಂದ ಕೃಷಿ ಜಮೀನನ್ನು ಅಭಿವೃದ್ದಿಗೊಳಿಸಲು ಕಂಕಣ ಬದ್ದರಾದರು. ಕೆಲಸಗಾರರು ಸಿಗದ ಸಂದರ್ಭದಲ್ಲಿ ತಾನೇ ಬೆಳಿಗ್ಗೆಯಿಂದ ಸಂಜೆಯ ತನಕ ತೋಟದಲ್ಲಿ ಕೆಲಸ ಮಾಡಿದರು. ಅಡಿಕೆ ತೋಟವನ್ನು ವಿಸ್ತರಣೆ ಮಾಡುತ್ತಾ ಸಾಗಿದರು. ಅಮಾಸೆಬೈಲು ಕೆಳಸುಂಕದ ಬರೆಯ ತಪ್ಪಲಲ್ಲಿ ಬಂಜರು ಭೂಮಿಯಂತಿರುವ ಪ್ರದೇಶವನ್ನು ಖರೀದಿಸಿ ಅದನ್ನು ಸಾಹಸದಿಂದ ಕೃಷಿಗೆ ಪರಿವರ್ತಿಸಿದರು.
ಹೊಸ ಜಮೀನಿನಲ್ಲಿ ವಿಟ್ಲ, ಮೋಹಿತ್ ನಗರ, ಇಂಟರ್ ಮೋಹಿತ್, ಇಂಟರ್ ಸಿ ತಳಿಯ ಅಡಿಕೆ ಸಸಿಗಳ ನಾಟಿ ಮಾಡಿದರು. ಸಾವಯವ ಗೊಬ್ಬರವನ್ನು ಯಥೇಚ್ಛ ಪ್ರಮಾಣದಲ್ಲಿ ನೀಡುವ ಮೂಲಕ ತನ್ನ ಅಧ್ಯಯನ ಪ್ರವಾಸಗಳ ಅನುಭವವನ್ನು ಅದಕ್ಕೆ ದಾರೆ ಎರೆದರು. ನಾಲ್ಕು ವರ್ಷದ ಒಳಗೆ ಸುಂದರ ಫಲಭರಿತ ತೋಟವೊಂದರ ನಿರ್ಮಾಣ ಅಲ್ಲಿ ಆಯಿತು. ಅಷ್ಟಕ್ಕೆ ಸುಮ್ಮನುಳಿಯದ ಇವರು ಪಪ್ಪಾಯಿ ಕೃಷಿಗೆ ಮುಂದಾದರು. ರೆಡ್ಲೆಡಿ ಮತ್ತು ತೈವಾನ್ ತಳಿಯ ಪಪ್ಪಾಯಿ ಗಿಡ ನಾಟಿ ಮಾಡಿ ಯಶಸ್ಸು ಗಳಿಸಿದ್ದು ಈಗ ಇತಿಹಾಸ.ಇವರು ಪ್ರಗತಿಬಂಧುವಾಗಿ ಶ್ರಮವಿನಿಮಯ:
2004ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ರಟ್ಟಾಡಿಯಲ್ಲಿ ಅಮಾಸೆಬೈಲು ವಲಯದಲ್ಲಿಯೇ ಪ್ರಥಮ ಪ್ರಗತಿಬಂಧು ಸ್ವಸಹಾಯ ಸಂಘವನ್ನು ಆರಂಭಿಸಿದರು. ‘ಹೆಗಡೆ ಪ್ರಗತಿ ಬಂಧು ಸ್ವಸಹಾಯ ಸಂಘ’ದ ಮೂಲಕ ಶ್ರಮ ವಿನಿಮಯದ ಮೂಲಕ ಕೃಷಿ ಅಭ್ಯುದಯಕ್ಕೆ ನಾಂದಿ ಹಾಡಿದರು. ಕೃಷಿ ಅಭಿವೃದ್ದಿ ಮತ್ತು ಪುನಶ್ಚೇತನಕ್ಕೆ ಧ.ಗ್ರಾ.ಯೋಜನೆಯಿಂದ ಆರ್ಥಿಕ ನೆರವು ಪಡೆದು ಸದ್ವಿನಿಯೋಗಗೊಳಿಸಿದರು.ಅಧ್ಯಯನಾರ್ಥಿಗಳ ಭೇಟಿ:
ಇವರ ಕೃಷಿ ಕ್ಷೇತ್ರಕ್ಕೆ ರಾಜ್ಯದ ಬೇರೆ ಬೇರೆ ಕೃಷಿ ಅಧ್ಯನಾರ್ಥಿಗಳು ಭೇಟಿ ನೀಡಿದ್ದಾರೆ. ಮಾದರಿ ತೋಟ ನಿರ್ಮಾಣದ ಬಗ್ಗೆ ಇವರ ಚಿಂತನೆಗಳನ್ನು ಅನುಸರಿಸಿದವರು ಹಲವರಿದ್ದಾರೆ. ತೀರಾ ಕುಗ್ರಾಮದ ರಟ್ಟಾಡಿಯಲ್ಲಿ ಹಾಗೂ ಕೆಳಸುಂಕದ ಬರೆಯ ತಪ್ಪಲಿನ ಪ್ರದೇಶದಲ್ಲಿ ಇವರ ಕೃಷಿ ಪರಿಶ್ರಮದ ಫಲ ಯುವ ಕೃಷಿಕರಿಗೆ ಒಳ್ಳೆಯ ಪಾಠಶಾಲೆ. ಸತೀಶ ಹೆಗಡೆ ಅವರು ಕೂಡಾ ದೇಶದ ವಿವಿಧ ರಾಜ್ಯಗಳಿಗೆ ಕೃಷಿ ಅಧ್ಯಯನ ಪ್ರವಾಸ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕರಣ, ಮಿತವ್ಯಯ, ಯಾಂತ್ರೀಕರಣ, ಹೊಸ ತಾಂತ್ರಿಕತೆಯ ಅಳವಡಿಕೆ ಮಾಡಿಕೊಂಡಿದ್ದಾರೆ. ಕೃಷಿ ಹೊಂಡ ನಿರ್ಮಾಣ, ಸುಸ್ಥಿರ ಕೃಷಿಯ ಯಶಸ್ವಿ ವಿಧಾನಗಳ ಅನುಷ್ಠಾನ, ಋತುಮಾನ ಆಧಾರಿತ ತರಕಾರಿ ಕೃಷಿ ಹೀಗೆ ಸದಾ ವಾಸ್ತವಕ್ಕೆ ತೆರೆದಿರುವ ಯೋಚನಾಲಹರಿ ಇವರದ್ದು.ಸಾಧನೆಗೆ ಪ್ರಶಸ್ತಿ ಗೌರವ:
ಇವರ ಸಮಗ್ರ ಕೃಷಿ ಸಾಧನೆಗೆ 2015ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೃಷಿ ಪ್ರಶಸ್ತಿ, 2017ರಲ್ಲಿ ಕುಂದಾಪುರ ತಾಲೂಕು ಶ್ರೇಷ್ಠ ಕೃಷಿ ಪ್ರಶಸ್ತಿ, ‘ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ-2018’ ಲಭಿಸಿದೆ. 2015-2017ರ ತನಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂದಾಪುರ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ಸಾಹಿ ಯುವ ಕೃಷಿಕರಾಗಿರುವ ಇವರು ಕೃಷಿ ಮಾಹಿತಿದಾರರಾಗಿಯೂ ಹಲವಾರು ಕಡೆ ಮಾಹಿತಿ ನೀಡಿದ್ದಾರೆ.ಸಿಹಿ ನೀರು ಮೀನು ಸಾಕಾಣಿಯಲ್ಲಿ ಸಾಧನೆ:
ಸತೀಶ ಹೆಗಡೆಯವರು ಕಳೆದ 6-7 ವರ್ಷಗಳಿಂದ ಸಿಹಿ ನೀರು ಮೀನು ಕೃಷಿ ಮಾಡುತ್ತಿದ್ದಾರೆ. ಮೀನುಸಾಕಾಣಿಕೆಯ ಉದ್ದೇಶದಿಂದಲೇ ಕೆರೆ ನಿರ್ಮಿಸಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿಂದೆ ಅಮಾಸೆಬೈಲುವಿನಲ್ಲಿ ಧ.ಗ್ರಾ ಯೋಜನೆ ಆಯೋಜಿಸಿದ ಮೀನು ಸಾಕಾಣಿಕೆ ತರಬೇತಿಯಲ್ಲಿ ತರಬೇತಿ ಪಡೆದ ಇವರು ಧೈರ್ಯದಿಂದ ಮೀನು ಸಾಕಾಣಿಕೆ ಆರಂಭಿಸಿ, ಯಶಸ್ವಿಯಾದರು. ಇವರಿಂದ ಪ್ರೇರಿತರಾಗಿ ಇವತ್ತು ಸಾಕಷ್ಟು ಮಂದಿ ಮೀನು ಸಾಕಾಣಿಕೆಗೆ ಮುಂದಾಗಿದ್ದಾರೆ.ಇವರ ಪತ್ನಿ ಶಿಕ್ಷಕಿ ಗೀತಾ ಹೆಗಡೆ, ಪುತ್ರ ಆರ್ಥಿಕ್ ಹೆಗಡೆ ಅವರ ಜೊತೆಗಿನ ಸಂತೃಪ್ತ ಕುಟುಂಬದ ಸದಸ್ಯರಾಗಿರುವ ಇವರ ಪತ್ನಿ ಕೂಡಾ ಕೃಷಿಯಲ್ಲಿ ವಿಶೇಷ ಆಸಕ್ತಿಯುಳ್ಳವರು. ಸರ್ಕಾರಿ ಉದ್ಯೋಗ ಹುಡುಕಿ ಬಂದರೂ ಕೂಡಾ ತನಗೇ ಕೃಷಿಯೇ ಪ್ರಿಯ ಎಂದುಕೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ. ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿಕೊಳ್ಳುತ್ತಾರೆ.
ಒಟ್ಟಾರೆಯಾಗಿ ಸತೀಶ ಹೆಗಡೆಯವರ ಕೃಷಿ ಸಾಹಸ ಯುವ ಕೃಷಿಕರಿಗೆ ಮಾರ್ಗದರ್ಶಿಯಾಗಿದೆ.