ಮಂಗಳೂರು, ಸೆ.24 (DaijiworldNews/HR): ಅನವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ರಾತ್ರಿ ವೇಳೆ ತಿರುಗಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಳಿಕ ಅವರನ್ನು ಪುರಭವನಕ್ಕೆ ಕರೆದೊಯ್ದು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ವಿವಿಧೆಡೆ ರಾತ್ರಿ 9:00 ಗಂಟೆಯಿಂದ ಸುಮಾರು ಎರಡು ತಾಸುಗಳ ಕಾಲ ಕಾರ್ಯಚರಣೆ ನಡೆಸಿದ ಪೊಲೀಸರು ಹೆಲ್ಮೆಟ್ ರಹಿತವಾದ ಸಂಚಾರ, ತ್ರಿಬಲ್ ರೈಡಿಂಗ್, ಅಪಾಯಕಾರಿ ಜಾಲಿ ರೈಟಿಂಗ್, ಅತಿವೇಗದ ಚಾಲನೆ ಸೇರಿದಂತೆ ನಿಯಮ ಉಲ್ಲಂಘನೆ ಮಾಡುವವರನ್ನು ತಡೆದು ನಿಲ್ಲಿಸಿ ಅವರನ್ನು ಪುರಭವನಕ್ಕೆ ಕರೆದೊಯ್ದಿದ್ದಿದ್ದರು.
ಪುರಭವನದಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಕುಮಾರ್ ಮತ್ತು ಟ್ರಾಫಿಕ್ ವಿಭಾಗದ ಎಸಿಪಿ ನಟರಾಜನ್ ಅವರು ಸಂಚಾರ ನಿಯಮಗಳಿಗೆ ಸಂಬಂಧಿಸಿ ಮಾಹಿತಿ ನೀಡಿ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ನೂರಕ್ಕೂ ಹೆಚ್ಚು ಮಂದಿಯ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ರಾತ್ರಿ ವೇಳೆ ಅನವಶ್ಯಕವಾಗಿ ದ್ವಿಚಕ್ರವಾಹನ ಸವಾರರು ಸಂಚಾರ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.