ಮಂಗಳೂರು, ಸೆ. 23 (DaijiworldNews/SM): ತ್ಯಾಜ್ಯ ಸಂಗ್ರಹದಲ್ಲಿ ಮನಪಾ ಆಡಳಿತ ವೈಫಲ್ಯ ಕಂಡಿದೆ. ಆದರೆ, ಅದನ್ನು ಜನರ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ವಿನಯ್ ರಾಜ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಟನಿವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ ಹೆಚ್ಚಿನ ವೆಚ್ಚ ನೀಡಲಾಗಿದೆ. ಆದರೆ ರಾಮಕೃಷ್ಣ ಮಿಷನವರು ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಲು ಸಿದ್ಧವಿದ್ದಾರೆ. ಈಗಾಗಲೇ ಸ್ವಚ್ಛ ಮಂಗಳೂರು ಕಾರ್ಯದ ಮೂಲಕ ರಾಮಕೃಷ್ಣ ಮಿಷನ್ ಜನರ ವಿಶ್ವಾಸಗಳಿಸಿಕೊಂಡಿದೆ. ರಾಮಕೃಷ್ಣ ಮಿಷನ್ ಮೂಲಕ ನಗರದ ಹಲವು ಕಡೆಗಳಲ್ಲಿ ಸ್ವಚ್ಛತಾ ಕಾರ್ಯವಾಗಿದೆ. ಹಾಗೂ ಸ್ವಚ್ಛ ಮಂಗಳೂರು ಪ್ರಶಸ್ತಿ ಪಡೆಯಲು ಕಾರಣವಾಗಿದೆ. ಸ್ವಚ್ಛ ಮಂಗಳೂರು ನಿರ್ಮಾಣದ ದೃಷ್ಠಿಯಿಂದ ರಾಮಕೃಷ್ಣ ಮಿಷನ್ ಉತ್ತಮ ಕಾರ್ಯ ನಿರ್ವಹಿಸಿದೆ.
ಪ್ರಸ್ತುತ ಆಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ನೀಡಲಾಗುತ್ತಿರುವ ಮೊತ್ತವನ್ನೇ ತಮಗೆ ನೀಡಿ ನಗರದ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿ, ಶಾಸಕರು ಹಾಗೂ ಪಾಲಿಕೆಯ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. ಆದರೂ, ಮಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹ ಗುತ್ತಿಗೆ ನೀಡಲು ಹಿಂದೇಟು ಹಾಕಿದೆ ಎಂದು ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ವಿನಯ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.