ಮಂಗಳೂರು, ಸೆ. 23 (DaijiworldNews/SM): ಮೈಸೂರಿನ ಹಿಂದೂ ಯುವತಿಗೆ 35 ಲಕ್ಷ ರೂ. ವಂಚನೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ. ಮೈಸೂರಿನ ಯುವತಿ ತನಗೆ ಮೋಸ ಆಗಿದೆ ಅಂತಾ ಮಂಗಳೂರಿನ ಯುವಕನ ಮನೆಗೆ ಬಂದಿದ್ದಾಳೆ. ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಆಗ ಕೋಣಾಜೆ ಬಸ್ ಸ್ಟಾಂಡ್ ಗೆ ಬಂದು ಅಳುತ್ತಾ ಕುಳಿತಿದ್ದಾಳೆ. ಈ ವಿಚಾರವನ್ನು ಸಾರ್ವಜನಿಕರು 112 ಗೆ ಕರೆ ಮಾಡಿ ತಿಳಿಸಿದ್ದಾರೆ.
ಪೊಲೀಸರು ಬಸ್ ಸ್ಟಾಂಡ್ ಗೆ ಹೋಗಿ ಮಹಿಳೆಯ ಕಷ್ಟ ಕೇಳಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ದೂರನ್ನು ಇಲ್ಲಿ ಕೂಡ ಕೊಡಬಹುದು ಅಂತಾ ಹೇಳಿದ್ದಾರೆ. ಆದರೆ, ಮೈಸೂರಿನಲ್ಲೇ ಮೋಸ ಆಗಿರೋದು ಅಲ್ಲೇ ದೂರು ಕೊಡುತ್ತೇನೆ ಎಂದು ಯುವತಿ ಹೇಳಿದ್ದಾಳೆ. ಬಳಿಕ ಪೊಲೀಸ್ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಬಸ್ ಹತ್ತಿಸಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರಿಗೂ ಜೋಪಾನವಾಗಿ ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ, ಬಸ್ ನಲ್ಲಿರುವಾಗ ಅವರ ಅಡ್ವೋಕೇಟ್ ಇಲ್ಲೇ ದೂರು ನೀಡಲು ಹೇಳಿದ್ದಾರೆ. ಬಳಿಕ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾವು ಅವತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇನ್ನು ಪರಿಷತ್ ಕಲಾಪದಲ್ಲಿ ಮಂಗಳೂರು ಪೊಲೀಸರ ಮೇಲೆ ಎಮ್.ಎಲ್.ಸಿ ತೇಜಸ್ವಿನಿ ಆರೋಪ ಮಾಡಿದ್ದು, ಈ ವಿಚಾರಕ್ಕೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಎಂಎಲ್ ಸಿ ತೇಜಸ್ವಿನಿ, ಸೆಪ್ಟೆಂಬರ್ 21 ರಂದು ಮಂಗಳೂರಿಗೆ ಮೈಸೂರು ಮೂಲದ ಯುವತಿ ಬಂದಿದ್ದಳು. ಮೈಸೂರಿನಲ್ಲಿ ಮಂಗಳೂರು ಯುವಕನಿಂದ ಲವ್, ಸೆಕ್ಸ್ ದೋಖಾ ಆಗಿತ್ತು. ಇದನ್ನು ಪ್ರಶ್ನಿಸಲು ಮಂಗಳೂರಿ ಕೊಣಾಜೆಗೆ ಬಂದಿದ್ದಳು. ಈ ವೇಳೆ ಪೊಲೀಸರು ದೂರು ಪಡೆದಿಲ್ಲ ಅಂತಾ ಆರೋಪ ಮಾಡಿದ್ದಾರೆ. ಅಲ್ಲದೆ, ದೂರು ನೀಡೋಕೆ ಬಂದಾಕೆಯನ್ನು ಬಸ್ ಹತ್ತಿಸಿ ವಾಪಾಸ್ ಮೈಸೂರಿಗೆ ಕಳುಹಿಸಿದ್ದಾರೆ ಎಂದು ತೇಜಸ್ವಿನಿ ಆರೋಪಿಸಿದ್ದಾರೆ.
ಇನ್ನು ಲವ್ ಜಿಹಾದ್, ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆಯ ಮುಡಿಪು ಮೂಲದ ಮೊಹಮ್ಮದ್ ಆಜ್ವಿನ್ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ತಾನು ಹಿಂದೂ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಊಟಿಗೆ ಕರೆದುಕೊಂಡು ಹೋಗಿ ಮೊಹಮ್ಮದ್ ಅಜ್ವಿನ್ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ, ಯುವತಿಯ ಅರೆನಗ್ನ ಫೋಟೊ ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಬೆದರಿಕೆ ಹಾಕಿದ್ದ. ಯುವತಿಗೆ ಬ್ಲಾಕ್ ಮೇಲ್ ಮಾಡಿ ೩೫ ಲಕ್ಷ ಪಡೆದು ವಂಚಿಸಿದ್ದಾನೆ ಎನ್ನುವ ಆರೋಪ ಮೊಹಮ್ಮದ್ ಅಜ್ವಿನ್ ವಿರುದ್ಧ ಯುವತಿ ಮಾಡಿದ್ದು, ಈ ಕುರಿತು ವಿಶ್ವಹಿಂದೂಪರಿಷತ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟ ಪಡಿಸಿದೆ.