ಉಡುಪಿ, ಸೆ 23 (DaijiworldNews/MS): ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಗಿದೆ.
ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಸಿಬ್ಬಂದಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಡಿ.ಜಿ & ಐ.ಜಿ.ಪಿ ರವರಾದ ಶ್ರೀ ಪ್ರವೀಣ್ ಸೂದ್ ಐ.ಪಿ.ಎಸ್ ರವರು 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು.
ಸೆ.೨೩ರ ಗುರುವಾರ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ ಪಶ್ಚಿಮ ವಲಯದ ಐ.ಜಿ.ಪಿಯವರಾದ ಶ್ರೀ ದೇವಜ್ಯೋತಿ ರೇ ಐ.ಪಿ.ಎಸ್ ರವರು ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಡಿ.ವೈ.ಎಸ್ಪಿ ಸುಧಾಕರ ನಾಯಕ್, ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಮಂಜುನಾಥ ಗೌಡ, ಪಿ.ಐ ಮಣಿಪಾಲ, ಶರಣ್ ಗೌಡ, ಸಿ.ಪಿ.ಐ ಮಲ್ಪೆ, ಸಂಪತ್ ಕುಮಾರ್ ಸಿ.ಪಿ.ಐ ಕಾರ್ಕಳ, ಪಿ.ಎಸ್.ಐ ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿಯವರಾದ ಶಿವಾನಂದ, ದಿನೇಶ್, ನಿತಿನ್ ರವರನ್ನು ಅಭಿನಂದಿಸಿದ್ದಾರೆ.
ಪ್ರಕರಣದ ವಿವರ:
ಜುಲೈ 12 ರಂದು ಶ್ರೀಮತಿ ವಿಶಾಲಗಾಣಿಗ ರವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್ಮೆಂಟ್ ಅವರ ವಾಸದ ಫ್ಲ್ಯಾಟ್ನಲ್ಲಿಯೇ ಸುಫಾರಿ ಕಿಲ್ಲರುಗಳು ಹತ್ಯೆ ಮಾಡಿದ್ದರು. ಆರೋಪಿ ತುಂಬಾ ಚಾಕಚತ್ಯೆಯನ್ನು ಉಪಯೋಗಿಸಿ ಕೊಲೆ ಮಾಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿ, ಸಾರ್ವಜನಿಕರ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು.
ಉಡುಪಿ ಜಿಲ್ಲಾ ಎಸ್.ಪಿ ಶ್ರೀ ವಿಷ್ಣುವರ್ಧನ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಕಪುರದಲ್ಲಿ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಿದ ನಂತರ, ವಿಶಾಲ ಗಾಣಿಗರವರ ಪತಿ ರಾಮಕೃಷ್ಣ ಗಾಣಿಗರವರೇ ಈ ಕೊಲೆ ಮಾಡಲು ಸುಫಾರಿ ನೀಡಿರುವುದು ಬಹಿರಂಗವಾಯಿತು.