ಕಾಸರಗೋಡು, ಸೆ 23 (DaijiworldNews/MS): ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಗೆ ನಾಮಪತ್ರ ಹಿಂತೆಗೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ . ಸುರೇಂದ್ರನ್ ಗೆ ತನಿಖಾ ತಂಡವಾದ ಕ್ರೈಂ ಬ್ರಾಂಚ್ ಮತ್ತೆ ನೋಟಿಸ್ ನೀಡಿದೆ.
ಮೊಬೈಲ್ ಫೋನ್ ನ್ನು ತಪಾಸಣೆಗೆ ಹಾಜರು ಪಡಿಸುವಂತೆ ನೋಟಿಸ್ ನೀಡಿದೆ .ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಸಮರ್ಪಕವಾಗಿಲ್ಲ ಎಂದು ತನಿಖಾ ತಂಡ ದ ಗಮನಕ್ಕೆ ಬಂದಿದ್ದು , ಈ ಹಿನ್ನಲೆಯಲ್ಲಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಮೊಬೈಲ್ ಫೋನ್ ತಪಾಸಣೆಗೆ ನಿರ್ಧರಿಸಲಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿ ಕೆ . ಸುಂದರ ರಿಗೆ ನಾಮಪತ್ರ ಹಿಂಪಡೆಯಲು ಎರಡೂವರೆ ಲಕ್ಷ ರೂ ., ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ಆಮಿಷ ವೊಡ್ಡಿದ್ದು ಮಾತ್ರವಲ್ಲ ಬೆದರಿಕೆಯನ್ನು ಒಡ್ಡಲಾಗಿತ್ತು ಎಂದು ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ನಿರ್ಣಾಯಕ ಸುಳಿವು ಆಗಿರುವ ಮೊಬೈಲ್ ಫೋನ್ ಕಳೆದು ಹೋಗಿರುವುದಾಗಿ ಸುರೇಂದ್ರನ್ ಹೇಳಿಕೆ ನೀಡಿದ್ದು , ಆದರೆ ಮೊಬೈಲ್ ಫೋನ್ ಈಗಲೂ ಬಳಕೆಯಲ್ಲಿದೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ . ಈ ಫೋನ್ ನ್ನು ಒಂದು ವಾರದೊಳಗೆ ಹಾಜರು ಪಡಿಸುವಂತೆ ನೋಟಿಸ್ ನೀಡಲಾಗಿದೆ.
ನಾಮಪತ್ರ ಹಿಂಪಡೆಯಲು ಸುಂದರ ಅರ್ಜಿ ತಯಾರಿಸಿದ ಕಾಸರಗೋಡಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿಲ್ಲ ಎಂದು ಸುರೇಂದ್ರನ್ ಹೇಳಿಕೆ ನೀಡಿದ್ದು , ಇದು ಸುಳ್ಳು ಎಂದು ತನಿಖಾ ತಂಡ ಮಾಹಿತಿ ಕಲೆ ಹಾಕಿದೆ . ಸುರೇಂದ್ರನ್ ನೀಡಿದ ಹೇಳಿಕೆಗಳು ಸುಳ್ಳು ಎಂದು ತನಿಖಾ ತಂಡ ಪತ್ತೆ ಹಚ್ಚಿದ್ದು , ಇನ್ನಿತರ ಸಾಕ್ಷ್ಯಗಳನ್ನು ಕಲೆ ಹಾಕಲು ತನಿಖಾ ತಂಡ ತೀರ್ಮಾನಿಸಿದೆ .