ಪುತ್ತೂರು, ಸೆ 23 (DaijiworldNews/MS): ಕಳೆದ ಜನವರಿಯಲ್ಲಿ ಕಲ್ಲಪಳ್ಳಿ ಮತ್ತು ಪಾಣತ್ತೂರು ಮಧ್ಯೆ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ 7 ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ 2 ಲಕ್ಷದಂತೆ ಪರಿಹಾರ ಮಂಜೂರು ಮಾಡಿದೆ.
ಜನವರಿ ೩ ರಂದು ಸಂಭವಿಸಿದ ಈ ಅಪಘಾತದಲ್ಲಿ ಬಲ್ನಾಡು ಗ್ರಾಮದ ರಾಜೇಶ್ ನಾಯ್ಕ ಮತ್ತು ಆದರ್ಶ ನಾಯ್ಕ, ಜಾಲ್ಸೂರು ಗ್ರಾಮದ ರವಿಚಂದ್ರ ನಾಯ್ಕ, ಬೆಟ್ಟಂಪಾಡಿ ಗ್ರಾಮ ಶ್ರೀಮತಿ ಶೇಷಮ್ಮ, ಆರ್ಯಾಪು ಗ್ರಾಮದ ಶ್ರೀಮತಿ ಸುಮತಿ, ಪಾಣಾಜೆ ಗ್ರಾಮದ ಶ್ರೇಯಸ್ ಹಾಗೂ ನರಿಕೊಂಬು ಗ್ರಾಮದ ಶಶಿಧರ ಪೂಜಾರಿ ಮೃತಪಟ್ಟಿದ್ದರು.
ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ ಸಹಾಯಧನ ಮಂಜೂರು ಮಾಡುವಂತೆ ಸಚಿವ ಎಸ್. ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿಯವರನ್ನು ಕೋರಿದ ಹಿನ್ನಲೆಯಲ್ಲಿ ಪರಿಹಾರ ನಿಧಿಯಿಂದ ಈ ಸಹಾಯಧನ ಮಂಜೂರಾಗಿದೆ.
ಈ ವರ್ಷ ಜನವರಿ 3 ರಂದು ಅಪಘಾತ ಸಂಭವಿಸಿತ್ತು . ಬಲ್ನಾಡು ಚನಿಲ ಪಾಲೆಚ್ಚರ ರಾಜೇಶ್ (38), ಆವರ ಮಗ ಆದರ್ಶ್ (14), ಕುಂಜೂರು ಪಂಜ ದೇವಸ್ಯದ ನಾರಾಯಣ ಅವರ ಪುತ್ರಿ ಸುಮತಿ (26), ಪಾಣಾಜೆ ಅರ್ಲಪದವು ಅರ್ಧಮೂಲೆಯ ಶ್ರೇಯಸ್ (13), ಕುಕ್ಕುಂದೂರಿನ ರವಿಚಂದ್ರ (40), ಸೇಸಮ್ಮ ಅಲಿಯಾಸ್ ಜಯಲಕ್ಷ್ಮಿ, ಅಜ್ಜಿಲಕಲ್ಲು ಬಳಿಯ ಕಾಲೇಂಜಿಲಾದ ವಸಂತ್ ನಾಯ್ಕ್ ಅವರ ಪತ್ನಿ ಮತ್ತು ಬಂಟ್ವಾಳದ ನರಿಕೊಂಬುವಿನ ಬಸ್ ಕಂಡಕ್ಟರ್ ಶಶಿಧರ್ ಈ ಅಪಘಾತದಲ್ಲಿ ಮೃತಪಟ್ಟಿದ್ದರು .
ದುರಾದೃಷ್ಟವಶತ್ ಬಸ್ ವಿಮೆ ಹೊಂದಿರಲಿಲ್ಲ ಸಾವನ್ನಪ್ಪಿದವರಲ್ಲಿ ಯಾರೂ ಜೀವ ವಿಮೆಗೆ ಒಳಪಟ್ಟಿಲ್ಲ. ಇವರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು ಮತ್ತು ಕೃಷಿ ಕಾರ್ಮಿಕರಾಗಿದ್ದರು. ಈ ವಿಷಯಗಳನ್ನು ಪರಿಗಣಿಸಿ, ಶಾಸಕ ಅಂಗಾರ ಮತ್ತು ಮಠಂದೂರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು.