ಕಾರ್ಕಳ, ಸೆ 23(DaijiworldNews/MS): ಶಿರ್ಲಾಲು, ಅಜೆಕಾರು,ಕೆರ್ವಾಸೆ ಪರಿಸರದ ಮನೆಗಳ ಹಟ್ಟಗಳಿಂದ ಬೆಲೆಬಾಳುವ ಗೋವುಗಳನ್ನು ಕಳವು ಗೈದು ಮನೆ ಮಂದಿಗೆ ತಲಾವರು ತೋರಿಸಿ ಜೀವ ಬೆದರಿಕೆಯೊಡ್ಡಿ ಅಶಾಂತಿ ಉಂಟು ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಚರಣೆ ತೀವ್ರಗೊಂಡಿದ್ದು, ಮೂಡಬಿದಿರೆ ಪರಿಸರದಿಂದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕೇರಿದೆ.
ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋವುಗಳ ಕಳವು ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಸ್ಥಳೀಯ ಬ್ರೋಕರ್ ಕೈಜೋಡಿಸಿರುವುದು ಕೃತ್ಯ ಇನ್ನಷ್ಟು ನಡೆಯಲು ಕಾರಣವಾಗಿದೆ. ಶಿರ್ಲಾಲು ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ರೋಕರ್ ಕಡ್ತಲದ ಸತೀಶ್ ನಾಯ್ಕನನ್ನು ಪೊಲೀಸರು ಬಂಧಿಸಿದ್ದು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮೂಡಬಿದ್ರಿ ಗಂಟಾಲ್ಕಟ್ಟೆ ಪರಿಸರದ ಝಬೀರ್, ಸಲೀಮ್ ಎಂಬವರು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಮತ್ತೊಬ್ಬ ಇಚ್ಚ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
ಮೂಡಬಿದ್ರಿಯ ಗಂಟಾಲುಕಟ್ಟೆ,ಹಂಡೇಲು, ಜೋಕಟ್ಟೆ, ಬಜಪೆ, ಕಾರ್ಕಳದ ತೆಳ್ಳಾರು, ಈದುವಿನಲ್ಲಿ ಅಕ್ರಮ ಕಸಾಯಿಖಾನೆಗಳಿದ್ದು, ಗಂಟಾಲುಕಟ್ಟೆ, ಹಂಡೇಲು, ಜೋಕಟ್ಟೆ ಪರಿಸರದಲ್ಲಿ ಪ್ರಸ್ತುತವಾಗಿ ಅಕ್ರಮ ಕಸಾಯಿಖಾನೆ ಕಾರ್ಯಚರಿಸುತ್ತಿದೆ.
ಮೂಡಬಿದ್ರಿ ಗಂಟಾಲ್ಕಟ್ಟೆಯಲ್ಲಿ ತಲೆ ಎತ್ತಿದ್ದ ಅಕ್ರಮ ಕಸಾಯಿಖಾನೆಯ ವಿರುದ್ಧವಾಗಿ ಹೋರಾಟದಲ್ಲಿ ನೇತೃತ್ವ ವಹಿಸಿದ ಮೂಡಬಿದ್ರಿಯ ಪ್ರಶಾಂತ್ ಪೂಜಾರಿಯನ್ನು ಇದೇ ವಿಚಾರದಲ್ಲಿ ಮೂಡಬಿದ್ರಿ ಬಸ್ ನಿಲ್ದಾಣದ ಹೆಬ್ಬಾಗಿಲ ಪಕ್ಕದ ಹೂವಿನ ಅಂಗಡಿಯಲ್ಲಿ ಬರ್ಬರವಾಗಿ ಕೊಲೆ ನಡೆಸಲಾಗಿತ್ತು.