ಮೂಡುಬಿದಿರೆ, ಸೆ. 22 (DaijiworldNews/SM): ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಕೋಂಕೆ ಎಂಬಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಕೆಟ್ಟು ಹೋಗಿ ನಾಲ್ಕೈದು ದಿನ ಕಳೆದರೂ ದುರಸ್ತಿ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ವಿದ್ಯುತ್ ಇಲ್ಲದ ಹಿನ್ನೆಲೆ ಜನರಿಗೆ ನೀರು ಪೂರೈಕೆ ಆಗದೆ ಸಮಸ್ಯೆ ತಲೆದೋರಿತ್ತು. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಅಲ್ಲಿನ ನಿವಾಸಿಗಳು ಜ್ಯೋತಿನಗರದಲ್ಲಿರುವ ಮೆಸ್ಕಾಂ ಕಚೇರಿ ಎದುರು ಕೊಡಪಾನಗಳನ್ನಿರಿಸಿ, ಗೇಟಿಗೂ ಕೆಲವು ಕೊಡಪಾನಗಳನ್ನು ಬಿಗಿದು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಆಲ್ವಿನ್ ಮಿನೇಜಸ್ ಅವರ ನೇತೃತ್ವದಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಅಧಿಕಾರಿಗಳು ಕೊನೆಗೂ ಪ್ರತಿಭಟನೆಗೆ ಮಣಿದು ರಾತ್ರೋರಾತ್ರಿಯೇ ಟ್ರಾನ್ಸ್ ಫಾರ್ಮರ್ ದುರಸ್ಥಿ ಕೈಗೊಂಡರು. ತ್ವರಿತವಾಗಿ ರಾತ್ರೆಯೇ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸಲು ಅಧಿಕಾರಿಗಳು ಮುಂದಾದ ಬಳಿಕ ಪ್ರತಿಭಟನೆ ಹಿಂತೆಗೆಯಲಾಯಿತು.