ಮಂಗಳೂರು, ಸೆ. 22 (DaijiworldNews/SM): ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಎಂಸಿಎಫ್ ನಲ್ಲಿ ಉದ್ಯೋಗದಲ್ಲಿದ್ದ 24 ವರ್ಷದ ಎಸಿ ಮೆಕ್ಯಾನಿಕ್ ಮೃತಪಟ್ಟ ಘಟನೆ ಸೆಪ್ಟೆಂಬರ್ 22ರ ಬುಧವಾರದಂದು ನಡೆದಿದೆ.
ಮೃತರನ್ನು ಯಡಪದವು ಪಟ್ಲಚಿಲ್ನ ಸದಾಶಿವ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಕೇಶವ್ ಅಲಿಯಾಸ್ ಕಿಟ್ಟಾ(24) ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ಕೇಶವ ರವಿವಾರ ತೆಂಗಿನಕಾಯಿ ಕೀಳಲು ಖರೀದಿಸಿದ ಸಲಕರಣೆಗಳ ಸಹಾಯದಿಂದ ನೆರೆಹೊರೆಯವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದ. ಮರವನ್ನು ಏರುವಾಗ, ಗಮನಿಸದೆ, ಅವನ ತಲೆ ಕಣಜದ ಗೂಡಿಗೆ ತಾಗಿದ್ದು, ತಕ್ಷಣವೇ ಅದು ಕೇಶವನ ಮೇಲೆ ದಾಳಿ ಮಾಡಿವೆ.
ಯುವಕನ ದೇಹದ ಮೇಲೆ ಸುಮಾರು 70ಕ್ಕೂ ಅಧಿಕ ಕಣಜದ ಹುಳುಗಳು ಕಚ್ಚಿವೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಮೂಡುಬಿದಿರೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಕಾರಣ ಕೊನೆಯುಸಿರೆಳೆದರು.