ಬೆಳ್ತಂಗಡಿ, ಸೆ. 22 (DaijiworldNews/SM): ಸೇಕ್ರೆಡ್ ಹಾರ್ಟ್ ಚರ್ಚ್, ಸೋಷಿಯಲ್ ಸರ್ವಿಸ್ ಸೆಂಟರ್, ಆರೋಗ್ಯ ಮತ್ತು ಸೌಹಾರ್ದ ಸಮಿತಿ, ಕೆ ಎಂಸಿ ಆಸ್ಪತ್ರೆ ಮಂಗಳೂರು, ಕ್ಯಾಡ್ ಪುನರ್ಜೀವನ ಟ್ರಸ್ಟ್, ರೋಟರಿ ಕ್ಲಬ್ ಮಡಂತ್ಯಾರು, ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಇ.ಸಿ.ಜಿ.ಉಪಕರಣ ಹಸ್ತಾಂತರ, ಹೃದಯ ರೋಗ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಮುದಾಯಭವನದಲ್ಲಿ ಜರಗಿತು.
ಮಡಂತ್ಯಾರು ಆಸುಪಾಸಿನ ಸುಮಾರು ನೂರ ಮೂವತ್ತಕ್ಕೂ ಹೆಚ್ಚಿನ ಜನರು ಈ ಶಿಬಿರದಲ್ಲಿ ಪಾಲ್ಗೊಂಡು ಇಸಿಜಿ ತೆಗೆದು ಹೃದ್ರೋಗ ತಪಾಸಣೆ ನಡೆಸಿದರು. ಮಂಗಳೂರಿನ ಖ್ಯಾತಹೃದ್ರೋಗ ವೈದ್ಯರು ಈ ಶಿಬಿರಕ್ಕೆ ಆಗಮಿಸಿ ಹೃದ್ರೋಗ ಮಾಹಿತಿ ಇಸಿಜಿ ಮೆಷಿನ್ ಹಸ್ತಾಂತರ ಹಾಗೂ ತಪಾಸಣೆಯ ಎಲ್ಲ ವ್ಯವಸ್ಥೆಯನ್ನು ಮಾಡುವಲ್ಲಿ ಸಹಕರಿಸಿದರು.
ಕಾಯಿಲೆ ಯಾರಿಗೂ ಬರಬಹುದು. ಈ ಹಿನ್ನೆಲೆಯಲ್ಲಿ ಜಾಗ್ರತರಾಗಬೇಕು. ಯಾವುದೇ ಷರತ್ತಿಲ್ಲದೆ ಸೇವೆ ಸಮಾಜಕ್ಕೆ ಕೊಡುವ ಉದ್ದೇಶ ನಮ್ಮದಾಗಿದೆ. ಹೃದ್ರೋಗ ಸೇವೆ ನಿಮ್ಮ ಮನೆ ಬಾಗಿಲಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ದೇಶಾದ್ಯಂತ ನೂರೈವತ್ತಕ್ಕೂ ಹೆಚ್ಚಿನ ಕಡೆಗಳಲ್ಲಿ ಈ ಸೇವೆಯನ್ನು ನೀಡಲು ಮುಂದಡಿಯಿಟ್ಟು ಮುಂದಕ್ಕೆ ಇನ್ನಷ್ಟು ಮುಂದುವರಿಸುವ ಹುಮ್ಮಸ್ಸು ಗುರಿ ಇದೆ ಎಂದು ವೈದ್ಯರು ತಿಳಿಸಿದರು.
ಮಡಂತ್ಯಾರು ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾ. ಬೇಸಿಲ್ ವಾಸ್ ರವರು ಮಾತನಾಡಿ, ಇದೊಂದು ಅಪರೂಪದ ವಿಶಿಷ್ಟ ಸೇವೆ. ಎಲ್ಲರೂ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂಬುದು ನಮ್ಮ ಆಶಯ ಎಂದರು. ಕಾರ್ಯಕ್ರಮದಲ್ಲಿ ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ಫಾ. ಅಶ್ವಿನ್, ಸಹಾಯಕ ಧರ್ಮಗುರುಗಳಾದ ಫಾ. ಸ್ಟೀವನ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲಿಯೊ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್ ಮೊರಾಸ್, ಸಂಯೋಜಕ ವಿವೇಕ್ ಪಾಯಿಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಮಡಂತ್ಯಾರು, ಕೆಎಂಸಿ ಆಸ್ಪತ್ರೆಯ ವಿ ವೇಟ್ ಸುವಾರಿಸ್, ಪ್ರದೀಪ್ ನಾಯಕ್ ಡಾ. ಆಯಿಷಾ, ಡಾ.ಸಾನಿಯಾ, ಡಾ ಅಶ್ವಿನ್, ಐಸಿವೈಎಂ ಅಧ್ಯಕ್ಷ ಶೈಲಿ ಡಿಸೋಜಾ, ಆರೋಗ್ಯ ಸಹಾಯಕಿ ಫ್ಲಾವಿಯಾ, ಶ್ರೀಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ, ರೋಟರಿ ಅಧ್ಯಕ್ಷರಾದ ಕಾಂತಪ್ಪ ಗೌಡ ಉಪಸ್ಥಿತರಿದ್ದರು.