ಕಾರ್ಕಳ, ಸೆ 22 (DaijiworldNews/MS): ದೇಶ ವ್ಯಾಪ್ತಿಯಲ್ಲಿ ಮತಾಂತರ ಹಾಗೂ ಗೋ ಹತ್ಯೆ ನಿಷೇಧ ಕಾನೂನು ಅನುಷ್ಠಾನಗೊಳಿಸುವ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಕನಸು ಸಕಾರಗೊಳ್ಳಲಿ. ಆ ಮೂಲಕ ರಾಮರಾಜ್ಯ ಸ್ಥಾಪನೆಯಾಗಲಿ ಎಂದು ಹಿಂದು ಜಾಗರಣಾ ವೇದಿಕೆಯ ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದರು.
ಶಿರ್ಲಾಲು, ಅಜೆಕಾರು, ಕೆರ್ವಾಸೆ ಪರಿಸರದಲ್ಲಿ ಅವ್ಯಾಹಕವಾಗಿ ನಡೆಯುತ್ತಿರುವ ಗೋ ಕಳವು ಹಾಗೂ ಗೋ ಹತ್ಯೆಯನ್ನು ನಿಗ್ರಹಿಸುವಲ್ಲಿ, ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಆರೋಪಿಸಿ ಮಂಗಳವಾರ ರಾತ್ರಿ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ಅಜೆಕಾರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಬಿ.ಎಸ್.ಯಡಿಯೂರಪ್ಪ ಅವರು ಉಡುಪಿಯ ಅಷ್ಟಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಅನುಷ್ಠಾನಕ್ಕೆ ತರುವುದಾಗಿ ವಾಗ್ದಾನ ನೀಡಿದರು. ಹಿಂದುಗಳನ್ನು ಕೆಣಕುವ ಪ್ರವೃತ್ತಿಗಾಗಿ ಗೋಹತ್ಯೆ ನಡೆಸಲಾಗುತ್ತಿದೆ. ಗೋವನ್ನು ಹತ್ಯೆಗೈದು ಅದರ ದೇಹದ ಭಾಗಗಳನ್ನು ಹಿಂದು ಶೃದ್ಧಾಕೇಂದ್ರದ ಮುಂದಿಟ್ಟು ಧಾರ್ಮಿಕ ಭಾವನೆಗಳಗೆ ಧಕ್ಕೆ ಉಂಟು ಮಾಡಲಾಗಿತ್ತಿದೆ. ಪ್ರಸಕ್ತ ದಿನಗಳಲ್ಲಿ ಹಟ್ಟಿಯಿಂದ ಗೋವುಗಳನ್ನು ಕದ್ದೊಯ್ಯುತ್ತಿದ್ದು, ಮುಂದಿನ ದಿನಗಳಲ್ಲಿ ಮನೆಗಳಲ್ಲಿನ ಹೆಣ್ಣು ಮಕ್ಕಳನ್ನು ಕದ್ದೊಯ್ಯುವ ತಾಲಿಬಾನ್ ಸಂಸ್ಕೃತಿಗಳು ಪುಟ್ಟಿದೇಳುವುದನ್ನು ತಳ್ಳಿ ಹಾಕುವಂತಿಲ್ಲ. ಕಾನೂನು ಸುವ್ಯವಸ್ಥೆ ಅಪಾಯದ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳ ಹಾಗೂ ಇತರ ವ್ಯವಸ್ಥೆಗಳ ಮೇಲೆ ನಂಬಿಕೆ ಇಟ್ಟವರು ನಾವಲ್ಲ. ನಾವು ಸಮಾಜದ ಮೇಲೆ ನಂಬಿಕೆ ಇಟ್ಟವರು. ಕಾನೂನು ಸುವ್ಯವಸ್ಥೆಗೆ ದಕ್ಕೆಯಾದಾಗ ಅದರ ವಿರುದ್ಧ ಧ್ವನಿ ಎತ್ತುವುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದರು.
ಶಾಂತಿಯುತ ಹೋರಾಟದ ಪ್ರೇರಣಾ ಶಕ್ತಿಯಾದವರು ಮಹಾತ್ಮಗಾಂಧಿಯವರು. ಅದೇ ಕಾರಣಕ್ಕಾಗಿ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅಜೆಕಾರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಜನೆ, ಘೋಷವಾಕ್ಯದೊಂದಿಗೆ ಶಾಂತ ರೀತಿಯಲ್ಲಿ ಸಂವಿಧಾನತ್ಮಕ ರೀತಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.
ತಡರಾತ್ರಿ ೧೧ರ ವೇಳೆಗೆ ಕಾರ್ಕಳ ಪೊಲೀಸ್ ವೃತ್ತನಿರೀಕ್ಷಕ ಸಂಪತ್ ಕುಮಾರ್ ಘಟನಾ ಸ್ಥಳಕ್ಕೆ ಅಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಕುಕೃತ್ಯ ವೆಸಗಿದ ಆರೋಪಿಗಳನ್ನು ಬಂಧನಕ್ಕೆ ಎಲ್ಲ ರೀತಿಯಲ್ಲಿ ರೂಪುರೇಷೆ ನಡೆಸಲಾಗಿದ್ದು, ಅದಕ್ಕೆ ಸಮಯ ನಿಗದಿ ಪಡಿಸುವುದು ತರವಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇಲಾಖೆಯ ಕರ್ತವ್ಯ ಅದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಮಹೇಶ್ ಬೈಲೂರು, ಪ್ರಶಾಂತ ನಾಯಕ್, ಗುರುಪ್ರಸಾದ್ ಶೆಟ್ಟಿ ನಾರಾವಿ, ಕಲ್ಲೊಟ್ಟೆ ರಮೇಶ್, ಶ್ರೀಕಾಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.