ಕಡಬ, ಸೆ.22 (DaijiworldNews/PY): ಇಲ್ಲಿನ ರಾಮಕುಂಜೇಶ್ವರ ವಸತಿ ನಿಲಯದಿಂದ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.
ಚಿಕ್ಕಮಗಳೂರು ನಿವಾಸಿ, ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಂ. ಎಂಬಾತ ಸೆ.21ರ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿ ಪತ್ತೆಯಾಗದ ಹಿನ್ನೆಲೆಯಲ್ಲಿ ಅಂಜನ್ ಅನ್ನು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಹಾಸ್ಟೆಲ್ ಮ್ಯಾನೇಜರ್ ಕಡಬ ಠಾಣೆಗೆ ದೂರು ನೀಡಿದ್ದರು.
ಈ ನಡುವೆ ಅಂಜನ್ ಊರಿಗೆ ತೆರಳುವುದಾಗಿ ತನ್ನ ಗೆಳೆಯರಲ್ಲಿ ಹೇಳಿದ್ದು, ಬುಧವಾರ ಬೆಳಿಗ್ಗೆ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.