ಮಂಗಳೂರು, ಸೆ 21(DaijiworldNews/MS): ಭಾರತದ ಪ್ರಮುಖ ನಗರಗಳಲ್ಲಿ ದಸರಾ ವೇಳೆಗೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇರೆಗೆ ಉತ್ತರಭಾರತದಲ್ಲಿ ಇತ್ತೀಚೆಗೆ ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿರುವ 6 ಮಂದಿ ಶಂಕಿತ ಉಗ್ರರಲ್ಲಿ , ಉಪ್ಪಿನಂಗಡಿಯಲ್ಲಿ ನೆಲೆಸಿದ್ದ, ಕೆಲ ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೂ ಸೇರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ 2-3 ವರ್ಷ ನೆಲೆಸಿದ್ದ ರಫೀಕ್ ಖಾನ್ ಎಂಬಾತ ಬಂಧಿತರಲ್ಲಿ ಓರ್ವ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಗೆ ರಫೀಕ್ ಖಾನ್ (45) ಎಂದು ಪರಿಚಯಿಸಿಕೊಂಡಿದ್ದ ಈತ ಮೂಲತಃ ಉತ್ತರಪ್ರದೇಶದವನು ಆಗಿದ್ದು, ಇಲ್ಲಿನ ಸ್ಥಳೀಯ ಯುವತಿಯನ್ನು 2019 ರಲ್ಲಿ ವಿವಾಹವಾಗಿ ಇಲ್ಲೇ ವಾಸವಿದ್ದ. ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತ ಸ್ಥಳೀಯರ ಸ್ನೇಹ ಬೆಳೆಸಿ ನಂಬಿಕೆ ಗಳಿಸಿಕೊಂಡಿದ್ದ. ಆದರೆ ಜು.17 ರಂದು ಈತ ಬೆಂಗಳೂರಿಗೆ ಕೆಲಸ ಮೇರೆ ಹೋಗಿ ಬರುವುದಾಗಿ ತಿಳಿಸಿ ನಾಪತ್ತೆಯಾಗಿದ್ದ. ನಾಪತ್ತೆಯಾಗಿರುವ ಬಗ್ಗೆ ಈತನ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಹಿಂದಿ ಹಾಗೂ ಉರ್ದುವನ್ನು ಸಾಮಾನ್ಯವಾಗಿ ಮಾತನಾಡುತ್ತಿದ್ದ ಈತ ನಿರ್ದಿಷ್ಟ ಪೋನ್ ಕರೆಗೆ ಮಾತ್ರ ಸ್ಥಳೀಯರು ಈವರೆಗೆ ಕೇಳದ ಭಾಷೆಯಲ್ಲಿ ಒಂದೇ ಸ್ಥಳದಲ್ಲಿ ನಿಲ್ಲದೆ ಓಡಾಡುತ್ತಾ ಮಾತನಾಡುತ್ತಿದ್ದ ಎನ್ನಲಾಗಿದೆ. ಕಳೆದ ವಾರ ದೆಹಲಿ ಪೊಲೀಸರು ಉಗ್ರರನ್ನು ಬಂಧಿಸಿದ್ದರು. ಅದರಲ್ಲಿನ ಆರು ಉಗ್ರರ ಪೈಕಿ ರಫೀಕ್ ಖಾನ್ ಇರುವ ಅನುಮಾನ ವ್ಯಕ್ತವಾಗಿದೆ.