ಪುತ್ತೂರು, ಸೆ 21(DaijiworldNews/MS): ತನ್ನ ಸಹೋದ್ಯೋಗಿ ಮತ್ತು ಮತ್ತೊಬ್ಬ ಸ್ನೇಹಿತನೊಂದಿಗೆ ನಗರದ ಹೋಟೆಲ್ನಲ್ಲಿ ಆಹಾರ ಸೇವಿಸುತ್ತಿದ್ದಾಗ "ಐದು ಜನರ ತಂಡ , ತಮ್ಮ ಹೆಸರು ವಿಳಾಸ ಕೇಳಿ, ನಿಂದನೆ ಮಾಡಿ ಹಲ್ಲೆ ನಡೆಸಿದೆ" ಎಂದು ಮಹಿಳೆಯೋರ್ವರು ಆರೋಪಿಸಿ ಪುತ್ತೂರಿನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಆನೇಕಲ್ ನಿವಾಸಿ ರಾಜೇಶ್ವರಿ (36) ಸಲ್ಲಿಸಿದ ದೂರಿನ ವಿವರಗಳ ಪ್ರಕಾರ, ಪುತ್ತೂರು ಪೊಲೀಸರು ವಶ ಮಾಡಿದ್ದ ತನ್ನ ಕಾರನ್ನು ಬಿಡಿಸಿಕೊಳ್ಳಲು ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಪುತ್ತೂರಿಗೆ ಸಹೋದ್ಯೋಗಿಗಳಾದ ಉಳ್ಳಾಲದ ನಿವಾಸಿ ಯು ಕೆ ಮೊಹಮ್ಮದ್ ಅರಾಫತ್ ಹಾಗೂ ಬೆಂಗಳೂರಿನ ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಬಾಡಿಗೆ ಕಾರಿನಲ್ಲಿ ಆಗಮಿಸಿದ್ದರು.
ಸೆ.20 ರಂದು, ಮೂವರೂ ರಾತ್ರಿ 7 ಗಂಟೆಗೆ ಲಾಡ್ಜ್ನಲ್ಲಿ ಊಟ ಮಾಡುತ್ತಿದ್ದಾಗ, ಲಾಡ್ಜ್ನ ಹೊರಗೆ ನಿಂತಿದ್ದ 10 ಜನರ ಪೈಕಿ 4-5 ಮಂದಿ , ಹತ್ತಿರ ಬಂದು ದೂರುದಾರರ ಹೆಸರು ಮತ್ತು ವಿಳಾಸವನ್ನು ಕೇಳಿ ಅವಾಚ್ಯ ಶಬ್ದಗಳಿಂದ ಬೈದು ಇವರೊಂದಿಗೆ ಇದ್ದ ಶಿವ ಎಂಬವರ ಮೇಲೆ ಹಲ್ಲೆ ಮಾಡಿ ಭಾವಚಿತ್ರವನ್ನು ತೆಗೆದು ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.