ಮಂಗಳೂರು,ಸೆ. 20 (DaijiworldNews/SM): ಪೊಲೀಸರೆಂದ ಕೂಡಲೇ ಮೂಗು ಮುರಿದುಕೊಳ್ಳುವವರೇ ಹೆಚ್ಚು. ಜನರು ಪೊಲೀಸರ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ, ಅದೇ ಪೊಲೀಸರಲ್ಲಿ ತುಂಬಾ ಮಂದಿ ಮಾನವೀಯತೆ, ಹೃದಯ ಶ್ರೀಮಂತಿಕೆ ಹೊಂದಿದವರು ಇದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ಸಾಮಾಜಿಕ ಕಳಕಳಿ ಮೆರೆತ ಪೊಲೀಸ್ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಗಿದೆ.
ಮಂಗಳೂರು ಉತ್ತರ ಠಾಣಾ ಸಿಬ್ಬಂದಿಗಳಾದ ಶಂಕರ್ ಹಾಗೂ ಸತೀಶ್ ಎಂಬವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಗೌರವಿಸಿದ್ದಾರೆ. ನಗರದ ಪಿವಿಎಸ್ ಜಂಕ್ಷನ್ ರಸ್ತೆಯೊಂದರಲ್ಲಿ ಸುರಿಯಲ್ಪಟ್ಟಿದ್ದ ಎಂಜಿನ್ ಆಯಿಲ್ ತೆರವುಗೊಳಿಸಿ ರಸ್ತೆ ಶುಚಿಗೊಳಿಸಿ ಹಲವು ಅಪಘಾತದಂತಹ ಸಂಭಾವ್ಯ ಘಟನೆಗಳನ್ನು ಈ ಸಿಬ್ಬಂದಿಗಳು ತಪ್ಪಿಸಿದ್ದಾರೆ.
ಇನ್ನು ಸಿಬ್ಬಂದಿಗಳು ಈ ಭಾಗದಲ್ಲಿ ಆಯಿಲ್ ಬಿದ್ದಿರುವುದನ್ನು ಗಮನಿಸಿದ್ದು, ಅದೇ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತವುಂಟಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಕ್ಷಣ ಶಂಕರ್ ಹಾಗೂ ಸತೀಶ್ ಮಾನವೀಯ ಕಾರ್ಯದಲ್ಲಿ ಕೈ ಜೋಡಿಸಿದ್ದು, ಹೆಚ್ಚಿನ ಅಪಘಾತ ತಪ್ಪಿಸಿದಂತಾಗಿದೆ. ಇನ್ನು ಈ ಕುರಿತಾದ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.