ಬೆಳ್ತಂಗಡಿ, ಸೆ. 20 (DaijiworldNews/SM): ಆರೋಗ್ಯ ಕಾರ್ಯಕರ್ತರೇನೋ ತಮಗೆ ಸರಕಾರ ನೀಡುವ ಜವಾಬ್ದಾರಿಗಳನ್ನು ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನು ಎದುರಿಸಿ ಅಚ್ಚುಕಟ್ಟಾಗಿ ಮುಗಿಸುತ್ತದೆ. ಆದರೆ, ಸರಕಾರಕ್ಕೆ ಮಾತ್ರ ಈ ವರ್ಗದ ಕನಿಷ್ಟ ಬೇಡಿಕೆಗಳನ್ನು ಈಡೇರಿಸಬೇಕೆಂಬ ಪರಿಜ್ಞಾನವಿಲ್ಲ. ಇದಕ್ಕೆ ಸಾಕ್ಷಿ ನುಡಿಯುವಂತಿದೆ ತಾಲೂಕಿನ ಕಾಣಿಯೂರಿನ ದಾದಿಯರ ಕಾರ್ಯ.
ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 10 ಉಪಕೇಂದ್ರಗಳಿದ್ದು ಕೇವಲ ಐದು ಮಂದಿ ಮಾತ್ರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಯುಷ್ ಗುತ್ತಿಗೆ ಆಧಾರದಲ್ಲಿ ಒಬ್ಬರು ವೈದ್ಯರು ಸೇವೆಯಲ್ಲಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನವಸತಿ ಪ್ರದೇಶ ತೀರಾ ಗ್ರಾಮೀಣ ಭಾಗವಾಗಿದೆ. ಮೂಲ ಸೌಕರ್ಯಗಳಿಲ್ಲದ ಗ್ರಾಮದಲ್ಲಿ ಆರೋಗ್ಯ ಸೇವೆ ಒದಗಿಸುವುದೇ ಸವಾಲಿನ ಕೆಲಸವಾಗಿದೆ.
ಆದರೆ, ತಾವು ಮಾಡುತ್ತಿರುವುದು ಭಗವಂತನ ಸೇವೆ ಹಾಗೂ ಪುಣ್ಯ ಕಾರ್ಯವೆಂದುಕೊಂಡಿರುವ ಈ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ದಾದಿಯರು ಅವರ ಕರ್ತವ್ಯಕ್ಕೆ ದ್ರೋಹ ಬಗೆಯದೆ, ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯುಸುತ್ತಿದ್ದಾರೆ. ಆದರೆ, ಸರಕಾರ ಮಾತ್ರ ಕಣ್ಣಿದ್ದೂ ಕುರುಡಾದಂತಾಗಿದೆ. ಈ ಗ್ರಾಮಕ್ಕೆ ಕನಿಷ್ಟ ರಸ್ತೆ ಮಾರ್ಗ ಸಮರ್ಪಕ ಮೂಲಭೂತ ವ್ಯವಸ್ಥೆ ಕಲ್ಪಿಸದೆ ಜನರು, ದಾದಿಯರು ಸಂಕಷ್ಟ ಅನುಭವಿಸುವಂತೆ ಮಾಡಿದೆ.
ಮೂಲಭೂತ ಸೌಕರ್ಯಗಳಿಲ್ಲದೆ ಎಷ್ಟೋ ಕುಟುಂಬಗಳಲ್ಲಿ ಹಿರಿಯ ನಾಗರಿಕರು, ರೋಗಿಗಳು ಮನೆಯಿಂದ ಹೊರಬರಲಾಗದೆ ಕಂಗಾಲಾಗಿದ್ದರು. ಅಂತಹ ಮನೆಗಳನ್ನು ಗುರುತಿಸಿ ಮನೆ ಮನೆಗಳಿಗೆ ಭೇಟಿಯನ್ನು ಕೊಟ್ಟು ಆರೋಗ್ಯ ಸೇವೆಯ ಜೊತೆಗೆ ಕೋವಿಡ್ ಲಸಿಕೆಯನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಟ್ಟ ಗುಡ್ಡಗಳನ್ನೇರಿ, ಹೊಳೆದಾಟಿ ನೂರಾರು ಕಿ.ಮೀ. ದಾರಿಯನ್ನು ನಡೆದುಕೊಂಡೇ ಹೋಗಿ ಸಂಕಷ್ಟದಲ್ಲಿದ್ದವರಿಗೆ ಆರೋಗ್ಯ ಭಾಗ್ಯ ಕರುಣಿಸುವ ಕಾಯಕವನ್ನು ಕಾಣಿಯೂರು ಆರೋಗ್ಯ ಕೇಂದ್ರದ ದಾದಿಯರು ಮಾಡುತ್ತಿದ್ದು, ಅವರಿಗೆ ಕೋಟಿ ನಮನ.