ಕಾರ್ಕಳ, ಸೆ. 20 (DaijiworldNews/HR): ಶಿರ್ಲಾಲು ಪರಿಸರದಲ್ಲಿ ಅವ್ಯಾಹಕವಾಗಿ ಗೋ ಕಳವು ಪ್ರಕರಣ ಜಾಲವನ್ನು ಅಜೆಕಾರು ಪೊಲೀಸರು ಭೇದಿಸಿದ್ದಾರೆ. ಗೋವುಗಳ ಮಾರಾಟ ಬ್ರೋಕರ್ ಕಡ್ತಲದ ಸತೀಶ್ ನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿಸಿದ ಪೊಲೀಸರು ಬಂಟ್ವಾಳ, ಮೂಡಬಿದ್ರಿ, ಜೋಕಟ್ಟೆ, ಬಜಪೆ ಪರಿಸರದ ಕೆಲವರು ಈ ಪ್ರಕರಣದಲ್ಲಿ ಶಾಮೀಲಾಗಿದ್ದು, ಅವರ ಬಂಧನಕ್ಕೆ ಕಾರ್ಯಚರಣೆ ನಡೆಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಶಿರ್ಲಾಲು,ಅಜೆಕಾರು,ಕೆರ್ವಾಸೆ ಪರಿಸರದ ಹಲವು ಮನೆಗಳ ಹಟ್ಟಿಗೆ ತಡ ರಾತ್ರಿ ದುಷ್ಕರ್ಮಿಗಳು ನುಗ್ಗಿ ಬೆಲೆಬಾಳುವ ದನಗಳನ್ನು ದರೋಡೆ ಮಾಡಿಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಮಂದಿಗೆ ತಲವಾರು ತೋರಿಸಿ ಬೆದರಿಸುತ್ತಿದ್ದ ಕೃತ್ಯದಿಂದಾಗಿ ಆ ಪರಿಸರ ನಾಗರಿಕರಲ್ಲಿ ಭಯದ ವಾತಾವರಣ ಉಂಟು ಮಾಡಿತು.
ಅದೇ ವಿಚಾರವನ್ನು ಮುಂದಿಟ್ಟು ಹಿಂದು ಜಾಗರಣಾ ವೇದಿಕೆಯ ಆಶ್ರಯದಲ್ಲಿ ಭಾನುವಾರದಂದು ಚಲೋ ಶಿರ್ಲಾಲ್ ಬೃಹತ್ ಪ್ರತಿಭಟನಾ ಸಭೆಯನ್ನು ಶಿರ್ಲಾಲು ಸಿದ್ಧಿ ವಿನಾಯಕ ಗಣೇಶ ಮಂದಿರ ವಠಾರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ನಡೆದ ಒಂದು ಗಂಟೆಯ ಬಳಿಕ ಅದೇ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾಗುತ್ತಿದ್ದ ಮಾರುತಿ ಕಾರೊಂದನ್ನು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಬೆನ್ನಟ್ಟಿದ ಸಂದರ್ಭದಲ್ಲಿ ಕಾರಿನೊಳಗೆ ಎರಡು ಗೋವುಗಳ ಕಾಲುಗಳಿಗೆ ಹಗ್ಗ ಬಿಗಿದು ಅಮಾನವೀಯ ರೀತಿಯಲ್ಲಿ ಕೂಡಿ ಹಾಕಿ ಅದರ ಮೇಲೆ ತಡಪಾಲು ಹಾಕಲಾಗಿತ್ತು ಅದೇ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರು ಪರಾರಿಯಾಗಿ ಸ್ಥಳೀಯ ಪ್ರಾರ್ಥನಾ ಕೇಂದ್ರವೊಂದರಲ್ಲಿ ಅವಿತಿರುವುದು ಘಟನೆ ವಿಕೋಪಕ್ಕೆ ತಿರುಗಲು ಕಾರಣವಾಗಿತ್ತು.
ಸಕಾಲದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಅಗಮಿಸಿ ಆರೋಪಿತರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಹಿಂದು ಜಾಗರಣಾ ವೇದಿಕೆ ಕಳೆದ 35 ವರ್ಷಗಳಿಂದ ಏನು ಹೇಳುತ್ತಾ ಬಂದಿದೆಯೋ ಅದನ್ನೆ ಮಾಡುತ್ತಿದೆ. ಮಾಡುವುದನ್ನೇ ಹೇಳುತ್ತಿದೆ. ತತ್ವ-ಸಿದ್ಧಾಂತದ ಮೇಲೆ ನಂಬಿಕೆ ಇರಿಸಿದೆ. ಎಲ್ಲೂ ಯಾರೊಂದಿಗೂ ರಾಜೀ ಮಾಡುವ ಮಾಡುವ ಪ್ರಮೇದ ಬರುವುದಿಲ್ಲ. ಮತಾಂತರ, ಗೋಹತ್ಯೆ ಎಲ್ಲಿಯ ತನಕ ಮುಂದುವರಿಯುತ್ತದೆಯೋ ಅಲ್ಲಿಯ ವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಮಂಗಳೂರು ಹಿಂದು ಜಾಗರಣಾ ವೇದಿಕೆಯ ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ ತಿಳಿಸಿದ್ದಾರೆ.