ಕುಂದಾಪುರ, ಸೆ.20 (DaijiworldNews/PY): ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದ ಯುವಕ ನೀರುಪಾಲಾದ ಘಟನೆ ಭಾನುವಾರ ತಾಲೂಕಿನ ವೊವಾಡಿ ಎಂಬಲ್ಲಿ ನಡೆದಿದೆ.
ನೀರುಪಾಲಾದ ಯುವಕನನ್ನು ಗುಜ್ಜಾಡಿ ಗ್ರಾಮದ ಕೊಡಪಾಡಿ ಹೋಲಿಕ್ರಾಸ್ ಸಮೀಪದ ನಿವಾಸಿ ಮಹೇಂದ್ರ (24) ಎಂದು ಗುರುತಿಸಲಾಗಿದೆ.
ಸೆ.19ರ ಭಾನುವಾರದಂದು ಮಹೇಂದ್ರ, ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ಆಶಿಕ್ (20) ಹಾಗೂ ತ್ರಾಸಿ ಆನಗೋಡು ನಿವಾಸಿ ಶರತ್ (25) ಎಂಬವರು ತ್ರಾಸಿಯ ಮೊವಾಡಿ ಸೇತುವೆ ಕೆಳಗಡೆ ಕುಳಿತಿದ್ದರು. ಈ ವೇಳೆ ಮಹೆಂದ್ರ ಹಾಗೂ ಆಶಿಕ್ ಈಜಲು ಇಳಿಯುತ್ತಿದ್ದಂತೆಯೇ ಮಹೇಂದ್ರ ನೀರಿನ ಸೆಳೆತಕ್ಕೆ ಸಿಲುಕಿದ್ದು ನೀರು ಪಾಲಾಗಿದ್ದಾರೆ. ಈ ವೇಳೆ ಆಶಿಕ್ ಕೂಡಾ ಅಪಾಯಕ್ಕೆ ಸಿಲುಕಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದು, ಭಾನುವಾರ ರಾತ್ರಿವರೆಗೂ ಪತ್ತೆಯಾಗಿಲ್ಲ. ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂಜಾ ನಾಯ್ಕ ಹಾಗೂ ಮತ್ತಿತರರು ಸ್ಥಳದಲ್ಲಿದ್ದು ಶೋಧ ಕಾರ್ಯಕ್ಕೆ ಸಹಕರಿಸಿದ್ದಾರೆ.