ಕಡಬ, ಸೆ 20 (DaijiworldNews/MS): ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿಯಾಗಿರುವ ಪ್ರಸ್ತುತ ಹೊಸಕೋಟೆಯ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ (ಎ.ಎನ್.ಎಂ.)ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮರಿಯಮ್ಮ ಅವರಿಗೆ 2020ನೇ ಸಾಲಿನ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೆಲ್ ಅವಾರ್ಡ್ ಲಭಿಸಿದೆ. ಸದ್ಯ ಮರಿಯಮ್ಮ ಅವರು ವರ್ಗಾವಣೆಗೊಂಡು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶಾದ್ಯಂತ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೆಲ್ ಪ್ರಶಸ್ತಿಗೆ ಒಟ್ಟು 51 ಮಂದಿ ಆಯ್ಕೆಗೊಂಡಿದ್ದು ಕೋವಿಡ್ ಕಾರಣದಿಂದಾಗಿ ಸೆ. 15ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಜರಗಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಹೊಸಕೋಟೆ ತಾ|ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ಲಭಿಸಿದೆ. ಕಳೆದ 30 ವರ್ಷಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು 1990ರಲ್ಲಿ ಸೇವೆಗೆ ಸೇರಿದ್ದರು. ಇವರ ಸೇವೆಗೆ 2007ರಲ್ಲಿ ಉತ್ತಮ ಹೆಲ್ತ್ ಅಸಿಸ್ಟೆಂಟ್ ಅವಾರ್ಡ್, 2011ರಲ್ಲಿ ಬೆಸ್ಟ್ ಸಬ್ಸೆಂಟರ್ ಅವಾರ್ಡ್ ಪಡೆದಿದ್ದಾರೆ.