ಕಾರ್ಕಳ, ಸೆ.19 (DaijiworldNews/PY): "ಪುರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ 11.5 ಕಿ.ಮೀ ಒಳಚರಂಡಿ ವ್ಯವಸ್ಥೆ ಇದ್ದು, ಅದರ ನವೀಕರಣ ಯೋಜನೆಗೆ 32 ಕೋಟಿ ರೂ. ಪ್ರಸ್ತಾಪವನ್ನು ಸರಕಾರದ ಮುಂದಿರಿಸಲಾಗಿದೆ. ರಾಜ್ಯ ಸರಕಾರದಿಂದ ಬಿಡುಗಡೆಗೊಂಡ 13 ಕೋಟಿ ರೂ. ವೆಚ್ಚದಲ್ಲಿ ಮೂರು ಕಿ.ಮೀವರೆಗಿನ ಒಳಚರಂಡಿ ಹಾಗೂ ನೂತನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 8 ಕೋಟಿ ರೂ. ವೆಚ್ಚವಾಗಿದ್ದು, ನಿರ್ವಹಣೆಗಾಗಿ 1.5 ಕೋಟಿ ರೂ.ಮೀಸಲಿಡಲಾಗಿದೆ" ಎಂದು ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರ ರಕ್ಷಿತ್ ರಾವ್ ಹೇಳಿದರು.
ಕಾರ್ಕಳ ಪುರಸಭಾ ಕಚೇರಿಯಲ್ಲಿ ಆಯೋಜಿಸಿದ ಕಾರ್ಕಳ ಪಟ್ಟಣದ ಒಳಚರಂಡಿ ಅಭಿವೃದ್ಧಿ ಕಾಮಗಾರಿಯ ಕುರಿತು ಜನಪ್ರತಿನಿಧಿಗಳೊಂದಿಗೆ ನಡೆದ ವಿಶೇಷ ಸಭೆಯಲ್ಲಿ ಮಾಹಿತಿ ನೀಡಿದರು.
"ಒಂದುವರೆ ಕಿ.ಮೀವರೆಗೆ ಒಳಚರಂಡಿಯ ಕಾಮಗಾರಿಯನ್ನು ಈಗಾಗಲೇ ಪುರಸಭಾ ಆಡಳಿತವು ನವೀಕರಿಸಿದೆ. ಸರಕಾರದಿಂದ ಅಗತ್ಯ ಅನುದಾನ ದೊರತಾಗ ಮುಂದಿನ ದಿನಗಳಲ್ಲಿ ಕಾಮಗಾರಿ ಮುಂದುವರಿಯಲಿದೆ. ಪ್ರಸ್ತುತ ಇರುವ ಒಳಚರಂಡಿ ಯೋಜನೆಯ ಮೂರು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ಅಂದು ದೂರದೃಷ್ಠಿ ಇರಿಸಿಕೊಂಡು ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಒಳಚರಂಡಿಗೆ ಬಳಸಲಾಗಿರುವ ಪೈಪಿನ ಗಾತ್ರವು ಇನ್ನೂ 30 ವರ್ಷಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಅಳವಡಿಸಲಾಗಿತ್ತು" ಎಂದರು.
ಮೂರು ಕಿ.ಮೀ ವರೆಗೆ ಪ್ರಸ್ತುತ ನಡೆಸಿದ ಒಳಚರಂಡಿಯ ನವೀಕರಣ ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಕಂಡುಬರುವುದಿಲ್ಲ. ಒಳಚರಂಡಿಯ ಚೇಂಬರ್ಗಳಲ್ಲಿ ತ್ಯಾಜ್ಯ ಉಕ್ಕಿ ಹರಿಯುತ್ತಿರುವುದಕ್ಕೆ ಒಳಚರಂಡಿ ಪೈಪ್ನಲ್ಲಿ ಕರಗದ ತ್ಯಾಜ್ಯಗಳನ್ನು ಬಿಡುತ್ತಿರುವುದರಿಂದ ಅಲ್ಲಲ್ಲಿ ಶೇಖರಣೆಗೊಂಡು ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗದೇ ಚೇಂಬರ್ ಮೂಲಕ ಉಕ್ಕುತ್ತಿರಲು ಕಾರಣವಾಗಿದೆ. ನಾಗರಿಕರ ಸಹಕಾರ ಇದ್ದಾಗ ಮಾತ್ರ ಯಾವುದೇ ಯೋಜನೆ ಪರಿಪೂರ್ಣವಾಗಲು ಸಾಧ್ಯವೆಂಬ ಸಲಹೆಯನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.
ನಗರ ವ್ಯಾಪ್ತಿಯಲ್ಲಿ ಒಳಚರಂಡಿಯ ಹಳೆ ಚೇಂಬರ್ಗಳು ಕುಸಿಯುತ್ತಿದ್ದು ಇದು ನಾಗರಿಕರಲ್ಲಿ ತಲ್ಲಣ ಉಂಟು ಮಾಡಿದೆ. ಈ ಕುರಿತು “ದಾಯ್ಜಿವಲ್ಡ್”ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಮಾತನಾಡಿ, ಅಗತ್ಯ ಇರುವಂತಹ ಕಡೆಗಳಲ್ಲಿ ಒಳಚರಂಡಿ ದುರವಸ್ಥೆ ಮಾಡದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕ ವಿ.ಸುನೀಲ್ಕುಮಾರ್ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಪುರಸಭಾ ವ್ಯಾಪ್ತಿಯಲ್ಲಿ ಇರುವ ಹಳೆಯ ಒಳಚರಂಡಿ ವ್ಯವಸ್ಥೆಯನ್ನು ದುರಸ್ಥಿ ಪಡಿಸಲು ಅಗತ್ಯ ಅನುದಾನವನ್ನು ಮಂಜೂರು ಮಾಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಒಳಚರಂಡಿ ಸಮರ್ಪಕವಾಗಿರಲಿ
ಒಳಚರಂಡಿ ಅಸಮರ್ಪಕವಾದ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯ ಹಲವು ಜಲಸಂಪನ್ಮೂಲದ ಬಾವಿಗಳು ಕಲುಷಿತವಾಗಿರುವುದನ್ನು ಮರೆಯಬಾರದು ಎಂದು ಶುಭದರಾವ್ ಸಭೆಯ ಗಮನಕ್ಕೆ ತಂದರು.
ಇದೇ ವಿಚಾರವನ್ನು ಮುಂದಿಟ್ಟು ಹರೀಶ್ ದೇವಾಡಿಗ ಮಾತನಾಡಿ, ಪ್ರಸ್ತುತವಾಗಿ ನವೀಕರಿಸಿದ ತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ ಲೋಪ ದೋಷ ಉಂಟಾದರೆ ಉದ್ಯಾವರ ನದಿಯ ನೀರು ಕಲುಷಿತಗೊಳ್ಳಬಹುದೆಂಬ ಎಚ್ಚರಿಕೆಯನ್ನು ಸಭೆಯ ಮುಂದಿಟ್ಟರು.
ಪುರಸಭಾ ಅಧ್ಯಕ್ಷೆ ಸುಮ ಅಧ್ಯಕ್ಷೆಯಲ್ಲಿ ಜರುಗಿದ್ದ ಈ ಸಭೆಯಲ್ಲಿ ಉಪಾಧ್ಯಕ್ಷೆ ಪಲ್ಲವಿರಾವ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮೊಲಾದವರು ಉಪಸ್ಥಿತರಿದ್ದರು.